ಮೂಡಿಗೆರೆ ತಾಲೂಕಿನ ಜಿ.ಅಗ್ರಹಾರದ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಶನಿವಾರ ದಿವ್ಯ ರಥೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ರಥೋತ್ಸವದ ಅಂಗವಾಗಿ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿಗೆ ವಿವಿಧ ಬಗೆಯ ವಿಶೇಷ ಪೂಜೆ ಸಲ್ಲಿಸಲಾಯಿತು.
ರಥೋತ್ಸವಕ್ಕೂ ಮುನ್ನ ಶ್ರೀ ಆದಿ ಸುಬ್ರಹ್ಮಣ್ಯ ಸ್ವಾಮಿಯ ಮೂಲ ವಿಗ್ರಹವನ್ನು ಉತ್ಸವದೊಂದಿಗೆ ಕರೆ ತರುವ ಮೂಲಕ ಪುಷ್ಪಾಂಲಕಾರಗೊಳಿಸಿದ ರಥದಲ್ಲಿ ಕೂರಿಸಲಾಯಿತು.
ವಿಷೇಶವೆಂದರೆ ಹಿಂದಿನಿಂದಲೂ ಪ್ರತಿ ವರ್ಷ ಗರುಡವೊಂದು ರಥದ ಸುತ್ತ ಸುತ್ತಿದ ಬಳಿಕ ರಥೋತ್ಸವ ನಡೆಯುತ್ತದೆ. ಅದರಂತೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಗರಡುವೊಂದು ಆಕಾಶದಲ್ಲಿ ಹಾರಾಡುತ್ತಾ, ರಥದ ಸುತ್ತ 3 ಸುತ್ತು ಸುತ್ತಿತು. ಬಳಿಕ ರಥೋತ್ಸವ ನಡೆಯಿತು.
ಈ ದೃಶ್ಯವನ್ನು ಹೊರ ಜಿಲ್ಲೆ, ರಾಜ್ಯ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿದರು.
ರಥೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನದ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಿ, ವಿದ್ಯುತ್ ದೀಪಾಲಂಕಾರ ಹಾಗೂ ಪುಷ್ಪಾಲಂಕಾರದಿಂದ ಸಿಂಗರಿಸಲಾಗಿತ್ತು.
ಜಾತ್ರೆಗೆ ತೆರಳುವ ಜನರಿಗೆ ಮೂಡಿಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.



