ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಪರಿಪಾಠ ಬೆಳೆಯಬೇಕು. ಜಾತಿ ಬೇದವನ್ನು ತೊಡೆದು ಹಾಕಬೇಕು ಎಂದು ಅದಿಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ ತಿಳಿಸಿದರು.
ಬಾಳೆಹೊನ್ನೂರು ಸೀಗೋಡು ಸಮುದಾಯ ಭವನದಲ್ಲಿ ಹೇರೂರು, ಹಿರೇಗದ್ದೆ ಮಂಡಲ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ಇತ್ತೀಚಿನ ದಿನಗಳಲ್ಲಿ ಜಾತಿ ವ್ಯವಸ್ಥೆಯ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದ್ದು, ನಮ್ಮಲ್ಲಿ ಆತ್ಮಪ್ರಜ್ಞೆ ಮೂಡಬೇಕಾಗಿದೆ. ತತ್ವ, ಆಚರಣೆಗಳು ಬೇರೆಬೇರೆಯಾಗಿದ್ದರೂ ಧರ್ಮ ಒಂದೇ ಎಂಬ ಮನೋಭಾವ ನಮ್ಮದಾಗಬೇಕು.
ಅದಿಚುಂಚನಗಿರಿಯಲ್ಲಿ ಸಂಸ್ಕøತ ಅಧ್ಯಯನ ನಡೆಸಿದ 200 ವಿದ್ಯಾರ್ಥಿಗಳು ಅಮೇರಿಕಾದ ವಿವಿಧ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಿದ್ದಾರೆ.
ವೇದ ಉಪನಿಷತ್ತುಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಸನ್ಯಾಸಿಗಳ ಬದುಕು ತ್ಯಾಗದ ಸಂಕೇತ. ಹಿರಿಯರನ್ನು ಗೌರವಿಸುವ, ಪ್ರೀತಿಸುವ, ಧರ್ಮ ಬೋಧನೆ ಮಾಡುವ ಸನ್ಯಾಸಿಗಳಿಗೆ ಯಾವುದೇ ಜಾತಿಯ ಸಂಕೋಲೆಗಳಿಲ್ಲ. ಜ್ಞಾನವಂತರಾದಲ್ಲಿ ಮಾತ್ರ ಧರ್ಮ,ಸಮಾಜ ಉಳಿಯುತ್ತದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಾಸನ ವಿಭಾಗದ ಪ್ರಮುಖ್ ಸುಮಂತ್ ನೆಮ್ಮಾರ್ ಮಾತನಾಡಿ, ದೇಶ, ಹಿಂದುತ್ವದ ಉಳಿವಿಗಾಗಿ ರಜಪೂತರಾದಿಯಾಗಿ ಅನೇಕರ ತ್ಯಾಗ ಬಲಿದಾನಗಳ ಇತಿಹಾಸ ನಮ್ಮ ಮುಂದಿದ್ದರೂ ಯಾವುದೂ ಪಠ್ಯದಲ್ಲಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಮಕ್ಕಳಿಗೆ ರಾಷ್ಟ್ರಭಕ್ತಿ ಶಿಕ್ಷಣವನ್ನು ನೀಡುವ ಅಗತ್ಯವಿದ್ದು, ಸರಕಾರಗಳು ಈ ಕುರಿತು ಗಮನ ಹರಿಸಬೇಕಾಗಿದೆ. ಸಾವಿರಾರು ದಾಳಿಗಳಾದರೂ ರಾಮಮಂದಿರ,ಸೋಮನಾಥ ದೇವಾಲಯ ತಲೆ ಎತ್ತಿ ನಿಂತಿರುವುದು ಹಿಂದೂ ಧರ್ಮದ ಹಗ್ಗಳಿಕೆ.ಹಿಂದುಗಳ ನಂಬಿಕೆ,ನಡವಳಿಕೆ ಮೇಲೇ ದರ್ಪದ ದಾಳಿ ನಡೆಯುತ್ತಿದೆ.ಇಡೀ ಮನುಕುಲಕ್ಕಾಗಿ ಪ್ರಾರ್ಥಿಸುವ ಒಂದೇ ಒಂದು ಸಮಾಜ ನಮ್ಮ ಭಾರತೀಯರದ್ದು ಎಂದರು.
ಜಯಪುರ ರಸ್ತೆಯ ಕಮಾನು ಮೋರಿಯಿಂದ ಸೀಗೋಡಿನವರೆಗೆ ನೂರಾರು ಕಾರ್ಯಕರ್ತರು ನೂರಾರು ವಾಹನಗಳು,ವಿವಿಧ ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ನಡೆಸಿದರು. ಛದ್ಮವೇಷ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಸಮಾಜೋತ್ಸವದ ಆಯೋಜನಾ ಸಮಿತಿ ಸಂಚಾಲಕ ಎ.ಸಿ.ಸಂತೋಷ್ ಅರನೂರು, ಕಾಫಿ ಬೆಳೆಗಾರ ರಾಘವೇಂದ್ರ ಗುರು ಪ್ರಸಾದ್ ಹೆಬ್ಬಾರ್. ಹಿರೇಗದ್ದೆ ಗ್ರಾಮ ಪಂಚಾಯಿತಿ. ಸದಸ್ಯೆ ಸುಮಾ, ಬಬ್ಬುಸ್ವಾಮಿ ಸೇವಾ ಸಮಿತಿಯ ಶಿವಪ್ಪ, ಕೊಪ್ಪದ ಸಂದೇಶ್, ನಾರಾಯಣ ಮೂರ್ತಿ, ಕೆ.ಟಿ.ವೆಂಕಟೇಶ್, ಹುಲ್ಸೆ ರತ್ನರಾಜ್ ಜೈನ್, ಸಂಪಿಗೆಮನೆ ಪದ್ಮನಾಭ್, ಎಚ್.ಪಿ.ಕಾರ್ತಿಕ್.ಶ್ರೀದೇವಿ, ವೀಣಾ ದಿನೇಶ್ ಹೆಬ್ಬಾರ್, ಧನ್ವಿ. ಕೊಪ್ಪ ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಚ್.ಎಂ.ಸುಬ್ಬಣ್ಣ. ಕೆ.ಸಿ.ವೆಂಕಟರಮಣ ನಾವಡ, ಸುಜಿತ್ ನಡ್ನಳ್ಳಿ ಮುಂತಾದವರು ಭಾಗವಹಿಸಿದ್ದರು.



