ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ದಿನದ ದಿನಕ್ಕೆ ಬಾಗಿಲು ಮುಚ್ಚುತಿದ್ದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಬಹುತೇಕ ಕಡೆ ಬಂದಾಗುತ್ತಿವೆ ಮತ್ತೆ ಕೆಲವು ಕಡೆ ಶಾಲೆ ನಡೆಯುತ್ತಿದ್ದರು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಇಂಥ ಸನ್ನಿವೇಶದಲ್ಲಿ ಸರ್ಕಾರಿ ಶಾಲೆಗೆ ನವರೋಪ ನೀಡಲು ಗ್ರಾಮೀಣ ಯುವಕರ ತಂಡವೊಂದು ಸಜ್ಜಾಗಿದೆ.
ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಕರು ಸೇರಿ ಸಂಘಟಿಸಿರುವ “ಗ್ರಾಮದ ಹುಡುಗರು” ವಾಟ್ಸಪ್ ಗ್ರೂಪ್ ತಂಡವು ಇದೀಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನವರೂಪ ನೀಡಲು ಮುಂದಾಗಿದೆ.
ಶಾಲೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕರ್ಷಿತವಾಗಬೇಕಾದರೆ ಶಾಲೆಯ ಪರಿಸರವು ಪ್ರಮುಖ ಪಾತ್ರ ವಹಿಸುತ್ತದೆ ಈ ಹಿನ್ನೆಲೆಯಲ್ಲಿ ಗೌಡಹಳ್ಳಿ ಸರ್ಕಾರಿ ಶಾಲೆಗೆ ವಿಶಿಷ್ಟವಾದ ಚಿತ್ರಕಲೆಗಳೊಂದಿಗೆ ಗೋಡೆಗಳನ್ನು ಸಿಂಗರಿಸಿ ಶಾಲೆಗೆ ಆಕರ್ಷಕ ರೂಪ ನೀಡಲು ಮುಂದಾಗಿದ್ದಾರೆ.
ಪ್ರವೀಣ್ ಬೈದುವಳ್ಳಿ ನೇತೃತ್ವದ ಗ್ರಾಮದ ಹುಡುಗರು ವಾಟ್ಸಾಪ್ ಗ್ರೂಪ್ ಸದಸ್ಯರ ಈ ಕಾರ್ಯಕ್ಕೆ ವಿವಿಧ ಸಂಘಟನೆಗಳು, ಮಾಧ್ಯಮ ಸಂಸ್ಥೆಗಳು, ಶಾಲೆಯ ಹಳೇವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ., ಗ್ರಾಮಪಂಚಾಯಿತಿ, ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ.
ಇದೇ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಎರಡು ದಿನಗಳು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಹೆಸರಾಂತ ವರ್ಣಚಿತ್ರ ಕಲಾವಿದರ ತಂಡ ಎರಡು ದಿನಗಳ ಕಾಲ ಗ್ರಾಮದಲ್ಲಿ ಇದ್ದು, ಶಾಲೆಯ ಗೋಡೆ ಮತ್ತು ಕಾಂಪೌಂಡ್ ಗಳ ಮೇಲೆ ಆಕರ್ಷಕ ವರ್ಣಚಿತ್ರಗಳನ್ನು ಮೂಡಿಸಲಿದ್ದಾರೆ.
ಕಳೆದ ವರ್ಷ ಇದೇ ತಂಡ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಇದೇ ರೀತಿ ವರ್ಣರಂಜಿತ ಚಿತ್ತಾರಗಳೊಂದಿಗೆ ಶೃಂಗಾರ ಮಾಡಿ ನವರೂಪ ನೀಡಿತ್ತು.


ನಮ್ಮೂರ ಸರ್ಕಾರಿ ಕನ್ನಡ ಶಾಲೆ ಉಳಿಸೋಣ ಬನ್ನಿ ಎಂಬ ಕರೆಯೊಂದಿಗೆ ಗ್ರಾಮೀಣ ಪ್ರದೇಶದ ಯುವಕರು ಸರ್ಕಾರಿ ಶಾಲೆಗಳ ಕಡೆ ಮುತುವರ್ಜಿ ತೋರುತ್ತಿರುವುದು ಗಮನಾರ್ಹವಾಗಿದೆ. ಈ ಕಾರ್ಯಕ್ಕೆ ಸರ್ವರ ಸಹಕಾರವನ್ನು ಕೋರಿದ್ದಾರೆ.



