ಎಲ್ಲಿಯವರೆಗೆ ಸಮಾಜದಲ್ಲಿ ಲಿಂಗ ತಾರತಮ್ಯ ಇರುತ್ತದೆಯೋ, ಅಲ್ಲಿಯವರೆಗೆ ದೇಶದ ಮತ್ತು ಸಮಾಜದ ಸಮಗ್ರ ಅಭಿವೃದ್ಧಿ ಅಸಾಧ್ಯ” ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ, ಜಿಲ್ಲಾ ವಕೀಲರ ಸಂಘ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲೇ ಅಕ್ಕಮಹಾದೇವಿಯವರು ಲಿಂಗ ಸಮಾನತೆಯ ಧ್ವನಿ ಎತ್ತಿದ್ದರು ಎಂದು ಸ್ಮರಿಸಿದ ಅವರು, ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅವರು ಅನುಭವಿಸಿದ ಕಷ್ಟಗಳು ಇಂದಿನ ತಲೆಮಾರಿಗೆ ಸ್ಫೂರ್ತಿಯಾಗಬೇಕು ಎಂದರು.
ಬಸವಣ್ಣ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಮತ್ತು ರಾಜಾರಾಮ್ ಮೋಹನ್ ರಾಯ್ ಅಂತಹ ಸಮಾಜ ಸುಧಾರಕರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.
“ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಧಿನಿಯಮ 15(3) ರ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸಮಾನವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದ ಅವರು, ಇಂದಿರಾ ಗಾಂಧಿ, ಮದರ್ ಥೆÉರೇಸಾ, ಕಲ್ಪನಾ ಚಾವ್ಲಾ, ಬಚೇಂದ್ರಿ ಪಾಲ್ ಹಾಗೂ ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಾಧನೆಗಳನ್ನು ಉದಾಹರಿಸಿದ ಅವರು, ಮಹಿಳೆಯರು ತಮ್ಮ ಶಕ್ತಿಯನ್ನು ಅರಿತು ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಈ ಹಿಂದೆ ಸಮಾಜದಲ್ಲಿ ಸತಿ ಸಹಗಮನ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳಿದ್ದವು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದೆ ಮನೆಯಲ್ಲೇ ಇರಿಸಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಹಿಳೆಯರು ಎಲ್ಲ ಸವಾಲುಗಳನ್ನು ಮೀರಿ ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಮಹಿಳಾ ಸಬಲೀಕರಣ ಎಂದರೆ ಪುರುಷರ ಮೇಲೆ ದ್ವೇಷ ಸಾಧಿಸುವುದಲ್ಲ. ಮಹಿಳೆಯರಿಗೆ ಸಿಗಬೇಕಾದ ಸಮಾನ ಗೌರವ ಮತ್ತು ಅವಕಾಶಗಳನ್ನು ಸಮಾಜ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ಬದಲಾವಣೆ ಆರಂಭವಾಗಬೇಕು. ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಮಹಿಳಾ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದರುಮ
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, 1987ರ ಕಾಯ್ದೆಯಡಿ ಜಾರಿಗೆ ಬಂದಿರುವ ಈ ಪ್ರಾಧಿಕಾರವು ಅಸಹಾಯಕರಿಗೆ, ವಿಶೇಷವಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ವಾರ್ಷಿಕ 3 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವ ಪ್ರತಿಯೊಬ್ಬರಿಗೂ ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವು ನೀಡುತ್ತದೆ. ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ನಡೆಸಲು ವಕೀಲರನ್ನು ನೇಮಿಸಿಕೊಳ್ಳಲು ಶಕ್ತಿಯಿಲ್ಲದವರಿಗೆ ಪ್ರಾಧಿಕಾರದಿಂದಲೇ ಉಚಿತವಾಗಿ ವಕೀಲರನ್ನು ಒದಗಿಸಲಾಗುತ್ತದೆ ಹಾಗೂ ಅಸಮರ್ಥರಿಗೆ ನ್ಯಾಯಾಲಯದ ಶುಲ್ಕವನ್ನೂ ಪ್ರಾಧಿಕಾರವೇ ಭರಿಸುತ್ತದೆ ಎಂದರು.
ಬಂಧಿತರಾದ ವ್ಯಕ್ತಿಗಳಿಗೆ ಜಾಮೀನು ಪಡೆಯಲು ಆರ್ಥಿಕ ತೊಂದರೆಯಿದ್ದರೆ, ಅಂತಹವರ ಪರಿಸ್ಥಿತಿಯನ್ನು ಪರಿಶೀಲಿಸಿ ಸಬಲೀಕರಣ ಸಮಿತಿಯ ಮೂಲಕ 50,000 ರೂಪಾಯಿವರೆಗಿನ ಶ್ಯೂರಿಟಿ ಬಾಂಡ್ ಮೊತ್ತವನ್ನು ಸಹ ಪ್ರಾಧಿಕಾರವೇ ಪಾವತಿಸುತ್ತದೆ. ನ್ಯಾಯಾಲಯಕ್ಕೆ ಬರಲು ಸಾಧ್ಯವಾಗದ ಅಸಹಾಯಕರ ಮನೆಬಾಗಿಲಿಗೆ ಪ್ಯಾರಾ ಲೀಗಲ್ ವಾಲಂಟಿಯರ್ಸ್ ಭೇಟಿ ನೀಡಿ ನೆರವು ನೀಡಲಿದ್ದಾರೆ ಎಂದರು.
ಸಾರ್ವಜನಿಕರು ಯಾವುದೇ ಕಾನೂನು ನೆರವಿಗಾಗಿ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 15100ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಮಹಿಳೆಯರನ್ನು ಕೇವಲ ವರ್ಷದ ಒಂದು ದಿನ ಮಾತ್ರ ನೆನಪಿಸಿಕೊಳ್ಳದೆ, ವರ್ಷದ ಪ್ರತಿ ದಿನವೂ ಅವರನ್ನು ಗೌರವಿಸಬೇಕು. ಪುರುಷ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು.
ಸ್ತ್ರೀ ಮತ್ತು ಪುರುಷ ಪರಸ್ಪರ ಪೂರಕವಾಗಿ ಇದ್ದಾಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ. ಹಿಂದೆ ಮಹಿಳೆಯರಿಗೆ ರಕ್ಷಣೆ ಮತ್ತು ವಿದ್ಯಾಭ್ಯಾಸದ ಕೊರತೆ ಇತ್ತು. ಆದರೆ ಈಗ ಕಾಲ ಬದಲಾಗುತ್ತಿದ್ದು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಭಾನುಮತಿ ಬಿ.ಸಿ., ಪ್ರಕಾಶ್ ಬಿ., ಕುಲಕರ್ಣಿ ಗುರುಪ್ರಸಾದ್ ರಾಘವೇಂದ್ರ, ಸುಜಾತ, ದ್ಯಾವಪ್ಪ, ಲತಾ ಜೆ., ಅನುರಾಧಾ ಹೆಚ್.ಕೆ., ಮತ್ತು ಶರತ್ ಕುಮಾರ್ ಕೆ.ಎಸ್, ನಗರಸಭೆಯ ಉಪಾಧ್ಯಕ್ಷರಾದ ಲಲಿತಾ ರವಿನಾಯಕ್, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ಅನಿಲ್ ಕುಮಾರ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಇದ್ದರು.


