ಚಿಕ್ಕಮಗಳೂರಿಗೆ MEMU (Mainline Electric Multiple Unit) ರೈಲು ಸೇವೆ ಆರಂಭಿಸಬೇಕೆಂದು ರೈಲ್ವೇ ಸಚಿವರು ಮತ್ತು ಸಂಸದರಿಗೆ ಜಿಲ್ಲೆಯ ಜನರ ಪರವಾಗಿ ಅಭಿಷೇಕ್ ಕೋಳೂರು ಮನವಿ ಮಾಡಿದ್ದಾರೆ.
ಈ ಬಗ್ಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರಿಯವರಿಗೆ ಅವರು ಮನವಿ ಮಾಡಿದ್ದಾರೆ.
ಅವರು ತಮ್ಮ ಮನವಿಯಲ್ಲಿ ; ಚಿಕ್ಕಮಗಳೂರು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರಸ್ತುತ ಚಿಕ್ಕಮಗಳೂರಿಗೆ ಮುಖ್ಯವಾಗಿ ಕಡೂರು ಮೂಲಕ ರೈಲು ಸಂಪರ್ಕ ಇದೆ. ಆದರೆ ನಿಯಮಿತ ಹಾಗೂ ಕಡಿಮೆ ವೆಚ್ಚದ ರೈಲು ಸೇವೆಗಳ ಕೊರತೆಯಿಂದ ಪ್ರವಾಸಿಗರು ಮತ್ತು ದೈನಂದಿನ ಪ್ರಯಾಣಿಕರಿಗೆ ಅನೇಕ ತೊಂದರೆಗಳು ಉಂಟಾಗುತ್ತಿವೆ. ಇದರ ಪರಿಣಾಮವಾಗಿ ಹೆಚ್ಚಿನ ಜನರು ರಸ್ತೆ ಸಾರಿಗೆಯ ಮೇಲೆ ಅವಲಂಬಿತರಾಗುತ್ತಿದ್ದಾರೆ, ಇದರಿಂದ ಬೆಟ್ಟದ ಸಣ್ಣ ರಸ್ತೆಗಳಲ್ಲಿ ವಾಹನ ಸಂಚಾರದ ಒತ್ತಡ ಹೆಚ್ಚುತ್ತಿದೆ.
ಚಿಕ್ಕಮಗಳೂರು ಮತ್ತು ಬೆಂಗಳೂರು ಹಾಗೂ ಕಡೂರು ಮುಂತಾದ ಸಮೀಪದ ಪ್ರಮುಖ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ MEMU ರೈಲು ಸೇವೆ ಪ್ರಾರಂಭವಾದರೆ ಕೆಳಗಿನ ಪ್ರಯೋಜನಗಳು ದೊರೆಯುತ್ತವೆ:
- ಪ್ರವಾಸೋದ್ಯಮ: ಪ್ರವಾಸಿಗರಿಗೆ ಸುರಕ್ಷಿತ, ಸುಲಭ ಹಾಗೂ ಅರಾಮದಾಯಕ ಪ್ರಯಾಣದ ವ್ಯವಸ್ಥೆ ದೊರೆಯುತ್ತದೆ.
- ದೈನಂದಿನ ಪ್ರಯಾಣಿಕರು: ಸ್ಥಳೀಯ ನಿವಾಸಿಗಳಿಗೆ ವೇಗವಾದ, ಕಡಿಮೆ ವೆಚ್ಚದ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ ಲಭ್ಯವಾಗುತ್ತದೆ.
- ಪರಿಸರ ಲಾಭ: ರೈಲು ಬಳಕೆ ಹೆಚ್ಚುವುದರಿಂದ ರಸ್ತೆ ವಾಹನ ಸಂಚಾರ ಕಡಿಮೆಯಾಗುತ್ತದೆ ಮತ್ತು ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ಸಿಗುತ್ತದೆ.
ಆದ್ದರಿಂದ ಚಿಕ್ಕಮಗಳೂರಿಗೆ MEMU ರೈಲು ಸೇವೆ ಆರಂಭಿಸುವ ಸಾಧ್ಯತೆಯನ್ನು ದಯವಿಟ್ಟು ಪರಿಶೀಲಿಸಿ, ಈ ಪ್ರದೇಶದ ಸಂಪರ್ಕ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಚಿಕ್ಕಮಗಳೂರು ಜನತೆಯ ಪರವಾಗಿ ಮನವಿ ಮಾಡಿದ್ದಾರೆ.



