ಕಳಸ ಜೈನ ಬಾಂಧವರು ಶ್ರೀ ಮಹಾವೀರ ಸ್ವಾಮಿಯ 2625ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದರು. ಭಾನುವಾರ ಪಟ್ಟಣದಾದ್ಯಂತ ಅಹಿಂಸಾ ಪರಮೋ ಧರ್ಮದ ಘೋಷಣೆಗಳು ಮೊಳಗಿದವು.
ಬೆಳಿಗ್ಗೆ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಗವಾನ್ ಮಹಾವೀರ ಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಶಾಂತಿ ಮಂತ್ರಗಳ ಪಠಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಭಕ್ತರು ಸಾಲುಗಟ್ಟಿನಿಂತು ತೀರ್ಥಂಕರರ ದರ್ಶನ ಪಡೆದರು.
ನಂತರ ಶೃಂಗಾರಗೊಂಡ ತೆರೆದ ವಾಹನದಲ್ಲಿ ಮಹಾವೀರ ಸ್ವಾಮಿಯ ಭವ್ಯ ಮೆರವಣಿಗೆ ಜರುಗಿತು. ಕಳಸದ ಮಹಾವೀರ ರಸ್ತೆ ಹಾಗೂ ಮುಖ್ಯ ರಸ್ತೆಗಳಲ್ಲಿ ಸಾಗಿದ ಈ ಶೋಭಾಯಾತ್ರೆಗೆ ನಾಸಿಕ್ ಡೋಲ್ನ ಗಂಭೀರ ನಾದ, ಭಜನಾ ಮಂಡಳಿಗಳ ಕುಣಿತ ಮತ್ತು ಯುವ ಸಮೂಹದ ನೃತ್ಯ ವೈಭವ ಮೆರುಗು ನೀಡಿತು.
ಮೆರವಣಿಗೆಯಲ್ಲಿ ನೂರಾರು ಶ್ರಾವಕ-ಶ್ರಾವಕಿಯರು ಶ್ವೇತ ವಸ್ತ್ರಧಾರಿಗಳಾಗಿ ಪಾಲ್ಗೊಂಡು ಶಿಸ್ತಿನಿಂದ ಹೆಜ್ಜೆ ಹಾಕಿದ್ದು ನೋಡುಗರ ಕಣ್ಮನ ಸೆಳೆಯಿತು. ಶಾಂತಿ ಮತ್ತು ಅಹಿಂಸೆಯ ಸಂಕೇತವಾಗಿ ಈ ಮೆರವಣಿಗೆಯು ಇಡೀ ಪಟ್ಟಣದಲ್ಲಿ ಭಕ್ತಿಯ ಸಂಚಲನ ಮೂಡಿಸಿತು.
ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆಯು ಪುನಃ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ 108 ಪವಿತ್ರ ಕಲಶಗಳೊಂದಿಗೆ ಮಹಾವೀರ ಸ್ವಾಮಿಗೆ ಮಹಾಭಿಷೇಕವನ್ನು ನೆರವೇರಿಸಲಾಯಿತು. ನಂತರ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.



