ಕಡೂರಿನಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯಾದ್ಯಂತ ಕನ್ನಡ ಭುವನೇಶ್ವರಿ ರಥವು ಯಾತ್ರೆ ಕೈಗೊಂಡಿದ್ದು ಕಳಸದಿಂದ ಕೊಟ್ಟಿಗೆಹಾರಕ್ಕೆ ತಾಯಿ ಭುವನೇಶ್ವರಿ ರಥವು ತೇಜಸ್ವಿ ಪ್ರತಿಷ್ಠಾನಕ್ಕೆ ಮಧ್ಯಾಹ್ನ ಆಗಮಿಸಿತು.
ಭುವನೇಶ್ವರಿ ರಥಕ್ಕೆ ಪುಷ್ಪಾರ್ಚನೆ ಮಾಡಿದ ಕಸಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿ’ ಕನ್ನಡ ರಥ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರಕ್ಕೆ ಬಂದಿದೆ. ಸಾಹಿತ್ಯ ಸಮ್ಮೇಳನಗಳು, ಕನ್ನಡ ಭುವನೇಶ್ವರಿ ರಥಯಾತ್ರೆಯ ಸಂಚಾರವು ಸಾಂಸ್ಕೃತಿಕ ಪರಂಪರೆ ಭಾಷೆ ಮತ್ತು ಅಸ್ಮಿತೆಯನ್ನು ಎತ್ತಿ ಹಿಡಿಯುವ ಪ್ರಮುಖ ಕಾರ್ಯಕ್ರಮವಾಗಿದೆ. ಕನ್ನಡ ಮನಸುಗಳು ಕಡೂರಿನಲ್ಲಿ ಇದೇ 10ರಂದು ನಡೆಯುವ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದು ಒಂದಾಗಿ ಕನ್ನಡ ಸಂಸ್ಕೃತಿಯ ಪರಂಪರೆ ಉಳಿಸಬೇಕು’ಎಂದರು.
ಮೂಡಿಗೆರೆ ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ’ಕನ್ನಡ ಸಾಹಿತ್ಯ ಉಳಿಯಬೇಕಾದರೆ ನಾವು ಕನ್ನಡ ಭಾಷೆ ಮಾತನಾಡಿ ಬೆಳೆಸಬೇಕು.ಭಾಷೆ ಬಳಸುವುದರಿಂದ ಭಾಷೆ, ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ರೇಖಾ ರವಿರಾಜ್, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಚಂದ್ರು ಒಡೆಯರ್, ಕಸಾಪ ಬಣಕಲ್ ಹೋಬಳಿ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಜಿಲ್ಲಾ ಸಂಯೋಜಕ ಎಚ್.ಎಂ.ಶಾಂತಕುಮಾರ್, ರಾಮಚಂದ್ರ, ಸದಸ್ಯರಾದ ಹಸೈನಾರ್ ಬಿಳಗುಳ, ಅನೂಪ್, ಸುಧೀರ್ ಮತ್ತಿತರರು ಇದ್ದರು.



