ರೈತರೊಬ್ಬರು ಮನೆಯ ಬಳಿ ಕಟ್ಟಿಹಾಕಿದ್ದ ಎರಡು ಎತ್ತುಗಳನ್ನು ದನಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜಾವಳಿ ಕೆಳಗೂರು ಸಂಪ್ಲಿ ಗ್ರಾಮದ ನಿವಾಸಿ ಚಿನ್ನೇಗೌಡ ಎಂಬುವವರ ಬೇಸಾಯ ಮಾಡುವ ಜೋಡೆತ್ತುಗಳನ್ನು ರಾತ್ರೋರಾತ್ರಿ ಖದೀಮರು ಕದ್ದೋಯ್ದಿದ್ದಾರೆ.
ಈ ಸಂಬಂಧ ಚಿನ್ನೇಗೌಡರು ಮತ್ತು ಅವರ ಪುತ್ರ ಅರುಣ್ ಕೆ.ಸಿ. ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ
ನಾನು ರೈತಾಪಿ ವರ್ಗದವರಾಗಿದ್ದು ಜಮೀನು ಉಳುಮೆ ಮಾಡಲು ಎತ್ತುಗಳ ಅವಶ್ಯಕತೆ ಇದ್ದುದರಿಂದ ನಾನು ಈಗ್ಗೆ ಸುಮಾರು 15 ವರ್ಷಗಳ ಹಿಂದಿನಿಂದಲೂ 02 ಎತ್ತುಗಳನ್ನು ಸಾಕಿಕೊಂಡಿದ್ದೆ. ದಿನಾಂಕ 06.05.2026 ರಂದು ಬೆಳಗ್ಗೆ ಎತ್ತುಗಳನ್ನು ನಮ್ಮ ಜಮೀನಿನಲ್ಲಿ ಮೇಯಲು ಬಿಟ್ಟಿದ್ದು ನಂತರ ಸಂಜೆ ಎತ್ತುಗಳು ಜಮೀನಿನಿಂದ ಹೊಡೆದುಕೊಂಡು ಬಂದು ಎತ್ತುಗಳನ್ನು ಕಟ್ಟಲು ದನದ ಕೊಟ್ಟಿಗೆ ನಮ್ಮ ಮನೆ ಹಿಂಭಾಗ ಇದ್ದು ಕೊಟ್ಟಿಗೆಯ ನೆಲ ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ನೆಲಕ್ಕೆ, ಸಿಮೆಂಟ್ ಈಗ್ಗೆ, 02 ದಿನಗಳ ಹಿಂದೆ ಹಾಕಿದ್ದು ಸಿಮೆಂಟ್ ನೆಲ ಗಟ್ಟಿಯಾಗಲು ಇನ್ನು 03 ದಿನಗಳು ಬೇಕಾಗಿದ್ದು ಆದ್ದರಿಂದ ನಮ್ಮ 02 ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದರೆ ನೆಲವನ್ನು ತುಳಿದು ಹಾಳು ಮಾಡುತ್ತವೆ ಎಂದು ಭಾವಿಸಿ ಕೊಟ್ಟಿಗೆಯ ಪಕ್ಕದ ಖಾಲಿ ಜಾಗಕ್ಕೆ ದನಗಳನ್ನು ಕಟ್ಟಿ ರಾತ್ರಿ ಸುಮಾರು 11-00 ಗಂಟೆಗೆ ಪುನಃ ತಿನ್ನಲು ಹುಲ್ಲನು ಹಾಕಿ ನಂತರ ನಾನು ಮನೆಯಲ್ಲಿ ವಿಶ್ರಾಂತಿ ಪಡೆದಿರುತ್ತೇನೆ.
ಮರುದಿನ ಬೆಳಗ್ಗೆ 05-00 ಗಂಟೆಗೆ ಎದ್ದು ನೋಡಲಾಗಿ ನಮ್ಮ 02 ಎತ್ತುಗಳು ಕಾಣೆಯಾಗಿದ್ದು ಎತ್ತುಗಳು ಕಟ್ಟಿ ಹಾಕಿದ್ದ ಹಗ್ಗದ ಸಮೇತ ಎಲ್ಲಾದರು ಹೋಗಿರಬಹುದು ಎಂದು ಭಾವಿಸಿ ಜಮೀನಿನ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದುದರಿಂದ ದಿನಾಂಕ 06.05.2026 ರ ರಾತ್ರಿ 11-00 ಗಂಟೆಯಿಂದ ದಿನಾಂಕ 07.05.2026 ರ ಬೆಳಗ್ಗೆ 05-00 ಗಂಟೆ ಒಳಗಿನ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ 02 ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಕೈಗೊಳ್ಳಬೇಕಾಗಿ ಮತ್ತು ಕಳೆದುಹೋಗಿರುವ ಎತ್ತುಗಳನ್ನು ಹುಡುಕಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ದೂರು ನೀಡಿದ್ದಾರೆ.
ಬೇಸಾಯಕ್ಕೆ ಆಸರೆಯಾಗಿದ್ದ ಮತ್ತು ಬಹಳ ಪ್ರೀತಿಯಿಂದ ಸಾಕಿದ್ದ ಎತ್ತುಗಳನ್ನು ಕಳೆದುಕೊಂಡು ಚಿನ್ನೇಗೌಡರ ಕುಟುಂಬ ತೀವ್ರ ನೊಂದಿದ್ದಾರೆ. ಮನೆಯ ಅಂಗಳದಲ್ಲಿಯೇ ಕಟ್ಟಿದ್ದ ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಈ ಭಾಗದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಭಾಗದಲ್ಲಿ ರಾತ್ರಿಹೊತ್ತು ದನಗಳ್ಳರ ಹಾವಳಿ ಮಿತಿಮೀರಿದ್ದು, ಬೀಡಾಡಿ ದನಗಳನ್ನು ಮತ್ತು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ದನಗಳನ್ನು ಗೋಹತ್ಯೆಗಾಗಿ ಕದ್ದೊಯ್ಯುತ್ತಿರುವ ಘಟನೆಗಳು ಮರುಕಳಿಸುತ್ತಿವೆ.
ಪೊಲೀಸರು ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ, ಸೂಕ್ತ ವಿಚಾರಣೆ ನಡೆಸಿ ಚಿನ್ನೇಗೌಡರ ಎತ್ತುಗಳನ್ನು ಕದ್ದೊಯ್ದಿರುವ ಕಳ್ಳರನ್ನು ಪತ್ತೆಹಚ್ಚಿ ನ್ಯಾಯ ಕೊಡಿಸಬೇಕಾಗಿದೆ.



