ಈ ಜಗತ್ತಿನ ಸೃಷ್ಟಿ ಸರಿಯಾಗಿಯೇ ಇದೆ. ಆದರೆ ನಾವು ನೋಡುವ ದೃಷ್ಟಿ ಸರಿಯಾಗಿಲ್ಲ. ಇದರಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯವಾಗದಂತಾಗಿದೆ ಎಂದು ಗೌರಿಗದ್ದೆ ಆಶ್ರಮದ ಅವದೂತ ವಿನಯ್ ಗುರೂಜಿ ಹೇಳಿದರು.
ಅವರು ಗುರುವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 10 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಧರ್ಮ, ದೇವಸ್ಥಾನಗಳು ಮಾನವನ ಕಣ್ಣೊರಿಸುವ ತಾಣವಾಗಬೇಕು. ದಯೆಯ ಮರ್ಮವನ್ನರಿತು ಬದುಕುವುದೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಜ್ಞಾನದಿಂದ ಗಟ್ಟಿಯಾದಾಗ ಮಾತ್ರ ಅಂಬೇಡ್ಕರ್ ಅವರ ಆಶಯಕ್ಕೆ ಬೆಲೆ ಸಿಗುತ್ತದೆ. ಭಗವದ್ಗೀತೆ ಬರೆದ ಕೃಷ್ಣ ಎಷ್ಟು ಶ್ರೇಷ್ಟನೋ ಅದೇ ರೀತಿ ಈ ದೇಶದಲ್ಲಿ ಪ್ರತಿಯೊಬ್ಬರೂ ಸಮಾಜವಾಗಿ ಬದುಕು ಕಟ್ಟಿಕೊಳ್ಳುವಂತೆ ಸಂವಿಧಾನ ಬರೆದ ಅಂಬೇಡ್ಕರ್ ಕೂಡ ಶ್ರೇಷ್ಟ ವ್ಯಕ್ತಿ ಎಂದು ಹೇಳಿದರು.
ಮೋಟಮ್ಮ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕಳೆದ 24 ವರ್ಷದಿಂದ ಮಾಡಿಕೊಂಡು ಬರುತ್ತಿದ್ದು, ಅಂದಿನಿಂದಲೂ ಹೆಣ್ಣು ಹೆತ್ತವರ ಸಾಲದ ಕಣ್ಣೀರು ಹೊರೆಸುವ ಕಾರ್ಯ ಮಾಡಿದ್ದಾರೆ. ಈ ರೀತಿ ಎಲ್ಲಾ ಕಡೆ ಕನಿಷ್ಟ 10 ಜೋಡಿಗಳ ಸರಳ ವಿವಾಹ ನಡೆದರೆ ಅಷ್ಟೂ ಕುಟುಂಬ ಸಾಲದ ಹೊರೆಯಿಂದ ಹೊರ ಬರುತ್ತದೆ ಎಂದ ಅವರು, ಶಾಸಕಿ ನಯನಾ ಮೋಟಮ್ಮ ಅವರು ಉದ್ಯೋಗ ಮೇಳ ನಡೆಸಿ ನಿರುದ್ಯೋಗಿಗಳ ನೆರವಿಗೆ ಬರಬೇಕೆಂದು ಸಲಹೆ ನೀಡಿದರು.
ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತನ್ನ ಕ್ಷೇತ್ರದಲ್ಲಿರುವ 1020 ಹಳ್ಳಿಗಳಲ್ಲಿ ಪ್ರತಿ ವರ್ಷ ಕನಿಷ್ಟ ಇಬ್ಬರು ಹಿಂದುಳಿದ ವರ್ಗದವರು ಆರ್ಥಿಕವಾಗಿ ಮುಂದೆ ಬರಬೇಕು. ಜತೆಗೆ ನೆರೆಹೊರೆಯವರೂ ಕೂಡ ಆರ್ಥಿಕವಾಗಿ ಮುಂದೆ ಬರಲು ಶ್ರಮಿಸಬೇಕು. ಆಗ ನಿಜವಾಗಿಯೂ ಅಂಬೇಡ್ಕರ್ ಆಶಯ ಮತ್ತು ಹೋರಾಟಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಜೀವನ ತಿಳಿದುಕೊಂಡು ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯತ್ತೇವೆ. ದುಶ್ಚಟ್ಕಕೆ ಬಲಿಯಾಗದೇ ಉತ್ತಮ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶ್ರೀಮಂತರನ್ನಾಗಿ ಮಾಡುತ್ತೇವೆಂದು ನವ ದಂಪತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. .
ದಲಿತ ಪುರೊಹಿತರ ಕನ್ನಡ ಮಂತ್ರ:
ಸಕ್ಕಳಿ ಸಕ್ಕಳಿ ಸಾಸಂಭ ಗಲಿಗಲಿ, ಬಾರ ಬಾರ ಮದವಣ್ಣ ಬಲಗಾಲ ಮುಂದಿಟ್ಟು ಬಲಕೇನು ಕಂಡೆ? ಬಾಳೆ ತೋಟ ಕಂಡೆ. ಎಡಕ್ಕೇನು ಕಂಡ? ಎಲೆ ತೋಟ ಕಂಡೆ. ಮುಂದೇನು ಕಂಡೆ? ಕಟ್ಟೇಯ ಕಂಡೆ. ಕಟ್ಟೇಯ ಮುಂದೆ ತಕ್ಕೇಯ ಎತ್ತು, ತವರೆಯ ಹೂವ, ಬೆಳ್ಳಿಕೋಲು ಹಿಡಿಕೊಂಡು ಬೆಳಕಾಗಿ ಬರುವಾಗ ಯಾರ್ಯಾರ ಕಂಡ? ಭೂಮಿತಾಯಿ ಕಂಡೆ. ಬಸವೇಶ್ವರನ ಕಂಡೆ. ಹಳ್ಳಿದೇವನ ಕಂಡೆ. ಬೆಳ್ಳಿ ದೇವನ ಕಂಡೆ. ಶುಕ್ರನ ಕಂಡೆ. ಸೂರ್ಯ ದೇವನ ಕಂಡೆ. ವಾಯು ದೇವರ ಕಂಡೆ. ವರುಣ ದೇವನ ಕಂಡೆ. ಅಗ್ನಿ ದೇವರ ಕಂಡೆ. ಮಹೋರ್ತವೇ ಸಾವುದಾನ. ಸುಲಗ್ನ ಸಾವುದಾನ ಎಂಬ ಕನ್ನಡ ಮಂತ್ರವನ್ನು ದಲಿತ ಪುರೋಹಿತರಾದ ಎಚ್.ಡಿ.ಸುಬ್ರಹ್ಮಣ್ಯ, ಕೆ.ಎಲ್.ಸಾಗರ್, ಜಿ.ಎಚ್.ಕೋಮರಾಜ್, ದೇವರಾಜ್ ಸಬ್ಲಿ, ಡಿ.ಬಿ.ರಾಮಯ್ಯ, ರಮೇಶ್ ಪಠಿಸಿದರು.
ಮದುವೆ ದಾರೆ ಕಾರ್ಯವನ್ನು ಕೆಂಚಯ್ಯ ಮತ್ತು ಜಯಂತಿ ದಂಪತಿಗಳು ನೆರವೇರಿಸಿದರು. ಮಂಗಳೂರು ವಿ.ವಿ.ಕಾಲೇಜಿನ ಅಸಿಸ್ಟೆಂಟ್ ಪ್ರೋಪೇಸರ್ ಸಭಿತಾ ಗುಣ್ಮಿ, ಚಲನಚಿತ್ರ ನಿರ್ದೇಶಕ ಸುಧೀರ್ ಅತ್ತಾವರ ಮಾತನಾಡಿದರು.
ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಕಾಂಗ್ರೆಸ್ ಗೋಣಿಬೀಡು ಹೋಬಳಿ ಅಧ್ಯಕ್ಷ ಸುಬ್ರಾಯಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ರೇಶ್ಮಾ ಬೆಂಗಳೂರು, ಪೂರ್ಣೇಶ್ ಜಿ.ಹೊಸಳ್ಳಿ, ಎಸ್.ವೆಂಕಟರಾಮ್, ದೀಪಕ್ ಕಡಿದಾಳ್, ಅಶ್ವಥ್ ಮಾಕೋನಹಳ್ಳಿ, ಡಿ.ಎಸ್.ರಘು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದು, ನವ ದಂಪತಿಗಳಿಗೆ ಶುಭ ಹಾರೈಸಿದರು.



