ರೈತ ಹಿತರಕ್ಷಣಾ ವೇದಿಕೆಯಿಂದ ಕಡೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ರೈತರ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಮೇ.23ರಂದು ಬೆಳಗ್ಗೆ 10 ಗಂಟೆಗೆ ರೈತ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ಕುಮಾರ್ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಫಾ.ನಂ 50, 53 ಮಂಜೂರಾದ ರೈತರ ಭೂಮಿಯನ್ನು ಕಂದಾಯ ಕಾರ್ಯದರ್ಶಿಗಳು ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ಭೂ ಹಗರಣವಾಗಿದೆ ಎಂದು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ತನಿಖೆ ನಡೆಸಿದ ಅಧಿಕಾರಿಗಳು ವರದಿ ಸಲ್ಲಿಸುವುದನ್ನು ಬಿಟ್ಟು ಮಂಜೂರಾದ ಭೂಮಿಯನ್ನೇ ವಜಾ ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳಲಾಗಿತ್ತು. ಇದರಿಂದ ಬ್ಯಾಂಕ್ ಸಾಲ, ರಸಗೊಬ್ಬರ ಪಡೆಯಲು ಸಾಧ್ಯವಾಗುತ್ತಿಲ್ಲ.
ಇದನ್ನು ಪ್ರಶ್ನಿಸಿ ರೈತ ಹಿತರಕ್ಷಣಾ ವೇದಿಕೆಯು ಹೈಕೋರ್ಟ್ ಮೊರೆ ಹೋಗಿದ್ದರಿಂದ ಅಧಿಕಾರಿಗಳು ಅರ್ಜಿ ವಜಾ ಮಾಡಿರುವುದು ತಪ್ಪೆಂದು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನಮ್ಮ ಹೋರಾಟದಲ್ಲಿ ನ್ಯಾಯವಿದೆ ಎಂದು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರ ನೆರವಿಗೆ ನಿಲ್ಲಬೇಕು. ಇಲ್ಲವಾದರೆ ಮುಂದಿನ ಹೋರಾಟಕ್ಕೆ ಅಡಿಪಾಯ ಹಾಕುವ ಸಲುವಾಗಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಚರ್ಚಿಸಲು ಹೈಕೋರ್ಟ್ನ ಹಿರಿಯ ವಕೀಲರಾದ ಎಂ.ಶಿವಪ್ರಸಾದ್ ಹಾಗೂ ಎಚ್.ಎಂ.ಪ್ರಸಾದ್ ಭಾಗವಹಿಸಲಿದ್ದಾರೆ. ಅಲ್ಲದೇ ಮುಂದಿನ ಕಾನೂನು ಸಮರ ನಡೆಸಲು ನಮ್ಮಡೊನೆ ಚರ್ಚಿಸಿ ಸಲಹೆ ನೀಡಲಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಇಂದು ರೈತರು ಸಂಕಷ್ಟ ಪಡುವಂತಾಗಿದೆ. ರೈತರು ಮೋಸ ಮಾಡಿ ಭೂಮಿ ಪಡೆದಿರಲಿಲ್ಲ. ಅಪರಾಧ ಕೂಡ ಮಾಡಿಲ್ಲ. ಹಾಗಾಗಿ ಯಾರೂ ಕೂಡ ಭಯಪಡೆದೇ ಅಂದು ನಡೆಯುವ ಸಮಾವೇಶಕ್ಕೆ ಕಡೂರು ಮತ್ತು ಮೂಡಿಗೆರೆ, ಕಳಸ ತಾಲೂಕಿನ ಎಲ್ಲಾ ಎಲ್ಲಾ ಫಲಾನುಭವಿಗಳು ಹಾಗೂ ರೈತ ಬಂಧುಗಳು ಆಗಮಿಸಬೇಕು. ಜತೆಗೆ ಮುಂದಿನ ಕಾನೂನು ಸಮರಕ್ಕೆ ತಮ್ಮ ಆಧಾರ್ ಕಾರ್ಡ್ ಮತ್ತು ಪಹಣಿ ತರಬೇಕಾಗಿ ಮನವಿ ಮಾಡಿದರು.
ವೇದಿಕೆ ಉಪಾಧ್ಯಕ್ಷ ಸುರೇಶ್ ಬಂಕೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹ್ಯಾರಗುಡ್ಡೆ, ರವಿ ಮಗ್ಗಲಮಕ್ಕಿ, ಜಿ.ಯು. ಪ್ರಸನ್ನ ಗೌತುವಳ್ಳಿ, ಅಬ್ದುಲ್ ರೆಹಮಾನ್ ಇಂದ್ರವಳ್ಳಿ, ಅನಿಲ್ ಗುರುದೇವ್ ಜನ್ನಾಪುರ, ನವೀನ್ ಮರೇಬೈಲ್ ಉಪಸ್ಥಿತರಿದ್ದರು.



