ಬಿದರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮದ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ ತೋರಲಾಗುತ್ತಿದೆ. ಇ-ಸ್ವತ್ತು ಕೊಡುತ್ತಿಲ್ಲ. ವಸತಿ ಮನೆಗಳ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಬಗ್ಗೆ ಇಲ್ಲಿನ ಪಿಡಿಒ ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷಿಸುತ್ತಿದ್ದಾರೆಂದು ಬಿಜೆಪಿ ಮುಖಂಡ, ಜಿಲ್ಲಾ ದಿಶಾ ಸಮಿತಿ ಸದಸ್ಯ ಮನೋಜ್ ಹಳೆಕೋಟೆ ಆರೋಪಿಸಿದ್ದಾರೆ.
ಅವರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿ. ಬಿದರಳ್ಳಿ ಗ್ರಾ.ಪಂ. ಮೂಡಿಗೆರೆ ಪಟ್ಟಣಕ್ಕೆ ಸಮೀಪವಿದೆ. ತಾಲೂಕಿನ ಅಭಿವೃದ್ಧಿಗೆ ಈ ಗ್ರಾ.ಪಂ. ಪೂರಕವಾಗಿದ್ದರೂ ಇಲ್ಲಿನ ಅಭಿವೃದ್ಧಿ ಅಧಿಕಾರಿ ವಸತಿ ಯೋಜನೆಯಲ್ಲಿ ಮಂಜುರಾಗಿರುವ ಮನೆಗಳ ಜಿಪಿಎಸ್ ಮಾಡಿಕೊಡುತ್ತಿಲ್ಲ. ಇದರಿಂದ ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಕಟ್ಟಿಕೊಳ್ಳಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಮಳೆಗಾಲ ಸಮೀಪಿಸುತ್ತಿದ್ದು, ವಸತಿರಹಿತರು ಕಂಗಾಲಾಗಿದ್ದಾರೆ. ಇ-ಸ್ವತ್ತುಗಳ ಕಡತಗಳನ್ನು ಮೇಜಿನ ಕೆಳಗಿಟ್ಟು ನಿರ್ಲಕ್ಷಿಸಲಾಗುತ್ತಿದೆ ಎಂದು ದೂರಿದ್ದಾರೆ.
ವಿದ್ಯುತ್ ದಾರಿದೀಪಗಳು ಎಲ್ಲೆಡೆ ಹಾಳಾಗಿದ್ದು, ಅವುಗಳ ರಿಪೇರಿ ಮಾಡದೆ ಸಾರ್ವಜನಿಕರು, ಪಾದಾಚಾರಿಗಳು ಕತ್ತಲೆಯಲ್ಲಿ ತಿರುಗುವಂತಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕಾಟಾಚಾರಕ್ಕೆ ಗ್ರಾ.ಪಂ. ಬಂದು ಹೋಗುತ್ತಿದ್ದಾರೆ.
ಈ ಬಗ್ಗೆ ಜಿ.ಪಂ. ಸಿಇಒ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಮಧ್ಯಪ್ರದೇಶಿಸಿ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಗ್ರಾ.ಪಂ. ಅಭಿವೃದ್ಧಿಗೆ ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ.



