ಚಿಕ್ಕಮಗಳೂರು ಆಶ್ರಯ ಆಸ್ಪತ್ರೆಯಲ್ಲಿ ಆರ್ ಬಿ ಸಿ ಮಾತ್ರವಲ್ಲದೆ ಪೇಟ್ ಲೆಟ್ಸ್, ಪ್ಲಾಸ್ಮ ಸೇರಿದಂತೆ ಎಲ್ಲಾ ಕಾಂಪೋನೆಂಟ್ಸ್ ಗಳನ್ನು ಒಳಗೊಂಡ ಬ್ಲಡ್ ಬ್ಯಾಂಕ್ ಆರಂಭಗೊಂಡಿರುವುದರಿಂದ ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ ಸಾಲಿಮಠ ತಿಳಿಸಿದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡ ಬ್ಲಡ್ ಬ್ಯಾಂಕ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಬ್ಲಡ್ ಬ್ಯಾಂಕ್ ಗಳು ಇದ್ದರೂ ಎಲ್ಲಾ ಕಾಂಪೋನೆಂಟ್ಸ್ ಇದುವರೆಗೆ ಸಿಗುತ್ತಿರಲಿಲ್ಲ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜನ ಸಮಸ್ಯೆ ಎದುರಿಸಬೇಕಾಗಿತ್ತು. ಆದರೆ ಆಶ್ರಯ ಆಸ್ಪತ್ರೆಯಲ್ಲಿ ಆಧುನಿಕ ಬ್ಲಡ್ ಬ್ಯಾಂಕ್ ಆರಂಭಗೊಂಡಿರುವುದರಿಂದಾಗಿ ಜನ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದರು.
ಆಶ್ರಯ ಆಸ್ಪತ್ರೆ ನಿರ್ದೇಶಕ ಡಾ. ಅನಿಕೇತ್ ಮಾತನಾಡಿ, ಒಂದು ಕೋಟಿ ರೂ ವೆಚ್ಚದಲ್ಲಿ ಆಧುನಿಕ ಉಪಕರಣಗಳು ಹಾಗೂ ಸೌಲಭ್ಯವನ್ನೊಳಗೊಂಡ ಬ್ಲಡ್ ಬ್ಯಾಂಕ್ ಆರಂಭ ಮಾಡಲಾಗಿದೆ. ಇದುವರೆಗೆ ಚಿಕ್ಕಮಗಳೂರಿನಲ್ಲಿ ಎಲ್ಲ ಕಂಪೋನೆಂಟ್ಸ್ ಇರುವ ಬ್ಲಡ್ ಬ್ಯಾಂಕ್ ಇರಲಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರು ರಕ್ತಕ್ಕಾಗಿ ಹಾಸನ ಅಥವಾ ಶಿವಮೊಗ್ಗಕ್ಕೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡು ರೋಗಿಗಳಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಎಲ್ಲ ಕಂಪೋನೆಂಟ್ಸ್ ಇರುವ ಬ್ಲಡ್ ಬ್ಯಾಂಕ್ ಆರಂಭ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಶ್ರಯ ಆಸ್ಪತ್ರೆ ನಿರ್ದೇಶಕ ಡಾ.ಕಾರ್ತಿಕ್, ವೈದ್ಯರಾದ ಡಾ.ಅಶ್ವಿನಿ, ಡಾ.ಜಗದೀಶ್, ವ್ಯವಸ್ಥಾಪಕ ಪುರುಷೋತ್ತಮ್ ಮತ್ತಿತರರಿದ್ದರು




