ನಾಯಕತ್ವ ಎಂದರೆ ಅಧಿಕಾರವಲ್ಲ, ಅದೊಂದು ಸಾಮಾಜಿಕ ಸೇವೆ ಮಾಡುವ ಜವಾಬ್ದಾರಿ. ತನ್ನ ಸಹಪಾಠಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಶಾಲಾ ಸಂಸತ್ತಿನ ಮೂಲಕ ನಾಯಕತ್ವ ಕೌಶಲ್ಯಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಂದು ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು.
ಸೋಮವಾರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಸಂಸತ್ತಿನ ಕಾರ್ಯಕ್ರಮ ಉದ್ಘಾಟನೆ ಹಾಗೂ ಶಾಲಾ ಮಂತ್ರಿಮಂಡಲದ ನೂತನ ಸಚಿವರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು. ನಾಯಕತ್ವ ಗುಣ, ಜವಾಬ್ದಾರಿತನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಾಲಾ ಸಂಸತ್ತಿನ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಶಾಲೆ ಮಂತ್ರಿ ಮಂಡಲದ ಸ್ಥಾನ ಪಡೆದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿ, ಶಿಸ್ತು, ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದ ಅವರು, ವಿದ್ಯಾರ್ಥಿದೆಸೆಯಲ್ಲಿ ಮುಂದಿನ ಭವಿಷ್ಯದ ಬಗ್ಗೆ ಗುರಿ ಇಟ್ಟುಕೊಳ್ಳಬೇಕು. ಶೈಕ್ಷಣಿಕ ಪಠ್ಯ ಪುಸ್ತಕದ ಜತೆಗೆ ಗ್ರಂಥಾಲಯದಲ್ಲಿ ದೊರಕುವ ಪುಸ್ತಕಗಳನ್ನು ಪ್ರತಿದಿನ ಓದುವ ಹವ್ಯಾಸ ಮಾಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಶರತ್ ವಹಿಸಿದ್ದರು. ತರುವೆ ಗ್ರಾ.ಪಂ. ಅಧ್ಯಕ್ಷ ರಘು, ಉಪಾಧ್ಯಕ್ಷೆ ಸ್ವರೂಪ ಪ್ರಶಾಂತ್, ಸದಸ್ಯೆ ಸ್ಮಿತಾ ರವಿ, ಮುಖ್ಯ ಶಿಕ್ಷಕಿ ಟಿ.ಎಸ್.ಭಾಗ್ಯ, ಸಂಜಯ್, ಶಿವರಾಮೇಗೌಡ, ಸತೀಶ್, ಶೈನಿ, ಮೇಘನ ಮತ್ತಿತರರಿದ್ದರು.



