ಶಿಕ್ಷಣ, ಆರೋಗ್ಯ ಕ್ಷೇತ್ರ, ಬಡವರ್ಗದ ಹೆಣ್ಣು ಮಕ್ಕಳ ವಿವಾಹ ಮತ್ತಿತರ ರೀತಿಯಲ್ಲಿ ಸಮಾಜ ಸೇವೆ ಮಾಡುವ ಸಂಘ-ಸಂಸ್ಥೆಗಳಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ ಎಂದು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ ಅಭಿಪ್ರಾಯಪಟ್ಟರು.
ಅಣಜೂರು ಗ್ರಾಮದ ಮಲ್ಹರಳ್ ಜುಮ್ಮಾ ಮಸೀದಿಯಲ್ಲಿ ಮಂಗಳವಾರ 17 ಮಸೀದಿಯನ್ನೊಳಗೊಂಡ ಸಂಯುಕ್ತ ಜಮಾತ್ ಒಕ್ಕೂಟದಿಂದ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಸಂಯುಕ್ತ ಜಮಾತ್ ಒಕ್ಕೂಟದಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಆರೋಗ್ಯ ಸಮಸ್ಯೆಯಿರುವ ರೋಗಿಗಳ ಚಿಕಿತ್ಸೆಗೆ ಸ್ಪಂದಿಸಲಾಗುವುದು. ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡಲಾಗುವುದು. 17 ಮಸೀದಿ ಜಮಾತಿನ ಪದಾಧಿಕಾರಿಗಳನ್ನು ಒಟ್ಟುಗೂಡಿಸಿ ಸಂಯುಕ್ತ ಜಮಾತ್ ಒಕ್ಕೂಟವನ್ನು ಸ್ಥಾಪಿಸಿ ಬಡವರ್ಗದವರ ಕಣ್ಣೀರೊರೆಸಲು ಮುಂದಾಗಿರುವುದಾಗಿ ತಿಳಿಸಿದರು.
ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಮುಸ್ತಫಾ ಯಮಾನಿ ಮಾತನಾಡಿ, ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ಮ್ಯಾಪಿಂಗ್ ಹಾಗೂ ಎಸ್ಐಆರ್ ಮೂಲಕ ದಾಖಲೆಯನ್ನು ಪಡೆಯುವ ಕಾಯ್ದೆ ಜಾರಿಗೊಳಿಸಲಾಗಿದೆ. ಮ್ಯಾಪಿಂಗ್ ಮತ್ತು ಬಿಎಲ್ಓಗಳಿಗೆ ದಾಖಲೆ ಒದಗಿಸುವ ಬಗ್ಗೆ ಯಾರೊಬ್ಬರು ಹಿಂಜರಿಯಬಾರದು. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಸರ್ಕಾರದ ಸವಲತ್ತಿನಿಂದ ವಂಚಿತರಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬರು ಸ್ಥಳೀಯ ಬಿಎಲ್ಓ ಅವರ ಬಳಿ ಹೋಗಿ ಮ್ಯಾಪಿಂಗ್ ಮಾಡಿಸಬೇಕು ಮತ್ತು ದಾಖಲೆ ಸಲ್ಲಿಸಬೇಕು ಎಂದು ತಿಳಿಸಿದರು.
ಸಂಯುಕ್ತ ಜಮಾತ್ ಒಕ್ಕೂಟದ ಕಾರ್ಯದರ್ಶಿ ಜೆ.ಬಿ.ಮೊಹಮ್ಮದ್ ಅಲಿ ಹಾಜಿ ಮಾತನಾಡಿ, ಒಕ್ಕೂಟವನ್ನು ಬಲಪಡಿಸಿ ಬಡವರ ಏಳಿಗೆಗಾಗಿ ಆಕರಿಸಲು ಒಕ್ಕೂಟದಿಂದ ಸದಸ್ಯತ್ವ ಅಭಿಯಾನ ನಡೆಯಲಿದೆ. 17 ಮಸೀದಿ ವ್ಯಾಪ್ತಿಯ ಪ್ರತಿಭಾನ್ವಿತ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕಾಗಿ ಪ್ರೋತ್ಸಾಹ ಧನ ನೀಡಲು ಜಮಾತ್ ಒಕ್ಕೂಟ ತೀರ್ಮಾನಿಸಿದೆ. ಸದಸ್ಯರ ಸಹಕಾರದಿಂದ ಸಮಾಜ ಸೇವೆ ಮುಂದುವರಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಮದರಸಾದ ಪ್ರತಿಭಾನ್ವಿತ ವಿದ್ಯಾರ್ಥಿ ಅಣಜೂರು ಗ್ರಾಮದ ಫಾರೂಕ್ ಎಂಬುವರ ಪುತ್ರ ಮಹಮ್ಮದ್ ತುಪೈಲ್ ನನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಅಣಜೂರು ಮಸೀದಿ ಅಧ್ಯಕ್ಷ ಹಸೈನಾರ್, ಅಕ್ರಂ ಹಾಜಿ, ಜೆ.ಬಿ.ಅಲಿ ಹಾಜಿ, ಅಬ್ದುಲ್ಲಾ ಹಾಜಿ, ಎ.ಎಂ.ಶರೀಫ್ ಹಾಜಿ, ಎಂ.ಮಜೀದ್, ಮಹಮ್ಮದ್ ಅಲಿ, ಎಂ.ಎಚ್.ಇಬ್ರಾಹಿಂ ಹಾಜಿ, ಎ.ಸಿ.ಅಯೂಬ್ ಹಾಜಿ, ಅಜ್ಗರ್ ಚಕಮಕ್ಕಿ, ಬಿ ಮೊಹಮ್ಮದ್ ಅಶ್ರಫ್, ಎಂ.ಎಸ್.ಇಬ್ರಾಹಿಂ ಹಾಜಿ, ಕಿರುಗುಂದ ಅಬ್ಬಾಸ್, ಸುಲೇಮಾನ್ ಮುಸ್ಲಿಯರ್, ಇಬ್ರಾಹಿಂ ಹಾಜಿ, ಅಬ್ದುಲ್ ರಜಾಕ್, ರಿಜ್ವಾನ್ ಅಲಿ, ಕರೀಂ, ಮಹಮ್ಮದ್, ರಜಾಕ್ ಮುಸ್ಲಿಯಾರ್, ನಾಸಿರ್, ಅಬ್ದುಲ್ ಕರೀಂ, ಹಂಝ, ಶುಕೂರ್, ರಫೀಕ್, ನಜೀರ್ ಇತರರಿದ್ದರು.



