ತಾಯ್ನುಡಿಯ ಭಾಷೆ ನಶಿಸಿದ್ದಲ್ಲಿ ಮನುಷ್ಯನ ಜೀವಾಳ ಕರಗಿ ಹೋಗಲಿದೆ. ಜನ್ಮವಿತ್ತ ಪಾಲಕರನ್ನು ಗೌರವಿಸುವ ರೀತಿಯಲ್ಲೇ, ಮಾತೃಭಾಷೆಯನ್ನು ಬೆಳೆಸಿ, ಗೌರವಿಸುವ ಸದ್ಗುಣ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಭಾನುವಾರ ಆಯೋಜಿಸಿದ್ಧ ನವೀಕೃತ ಕನ್ನಡ ಭವನ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ನೆಲ, ಜಲ ಮತ್ತು ಭಾಷೆಗೆ ಧಕ್ಕೆಯಾದಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಒಗ್ಗಟ್ಟಿನ ಮಂತ್ರವನ್ನು ಪಠಿಸುವುದು ಪ್ರತಿ ಕನ್ನಡಿಗರ ಕರ್ತವ್ಯ. ಕನ್ನಡ ಮಣ್ಣಿನಲ್ಲಿ ಜೀವಿಸಿದ ಪ್ರತಿ ಮಾನವನು ಮಾತೃ ಭಾಷೆಯನ್ನು ಪರಸ್ಪರ ಪ್ರೀತಿಯಿಂದ ಹಂಚಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನಾಡು ಹಾಗೂ ಜಿಲ್ಲೆಯ ಪರಂಪರೆ ಇಡೀ ದೇಶದಲ್ಲಿ ವಿಶೇಷತೆಯನ್ನು ಹೊಂದಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗೆ ಕನ್ನಡ ಭಾಷೆ ಭಾಜನವಾಗಿದೆ. ಜಿಲ್ಲೆಯು ಯುಗದ ಕವಿ ಕುವೆಂಪು ಅವರು ಜನಿಸಿದ ಅಪರೂಪದ ಕೇಂದ್ರವಾಗಿದೆ. ಹೀಗಾಗಿ ಇಲ್ಲಿನ ಸಾಹಿತ್ಯ ಪರಂಪರೆಗೆ ಅನೇಕರ ಕೊಡುಗೆ ಬಹಳಷ್ಟಿದೆ ಎಂದರು.
ಕನ್ನಡಿಗರಿಗೆ ಕನ್ನಡ ಭಾಷೆ ಇಲ್ಲದಿದ್ದರೆ ಜೀವನವೇ ಬರಿದಾಗಲಿದೆ. ನಾಡು, ನುಡಿ ಕಟ್ಟುವ ವಿಚಾರದಲ್ಲಿ ಸರ್ಕಾರದ ಜೊತೆಗೆ ಕನ್ನಡಪರ ಸಂಘ-ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಹೆಮ್ಮೆಯ ವಿಚಾರ. ಈ ನಮ್ಮ ಭಾಷಾ ಸಂಸ್ಕೃತಿಗೆ ಕನ್ನಡವೇ ಅಸ್ಥಿತ್ವದ ಸಂಕೇತವಾಗಿದ್ದು, ಇದು ಭವಿಷ್ಯದ ಯುವ ಪೀಳಿಗೆಗೆ ಪ್ರೇರಣೆ ಯಾಗಬೇಕು ಎಂದು ತಿಳಿಸಿದರು.
ಜಿಲ್ಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಮತ್ತು ಪಿಯುಸಿ ವ್ಯಾಸಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಸರ್ಕಾರಿ ಶಾಲೆ ಮಕ್ಕಳು, ಪಾಲಕರ ಪರಿಶ್ರಮದ ನಡುವೆ ಅತ್ಯಧಿಕ ಅಂಕ ಗಳಿಸಿರುವುದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು ಈ ವಿದ್ಯಾರ್ಥಿಗಳಂತೆ ಎಲ್ಲರೂ ಕಷ್ಟಪಟ್ಟು ವಿದ್ಯಾಭ್ಯಾಸ ಪೂರೈಸಿ ಸಮಾ ಜಕ್ಕೆ ಮಾದರಿಯಾಗಬೇಕು ಎಂದರು.
ಕನ್ನಡ ಭವನದ ಪಕ್ಕದಲ್ಲೇ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಮತ್ತು ಬೋಜನ ಕೊಠಡಿಗೆ ತಾವು ಅನುದಾನ ಬಿಡುಗಡೆ ಮಾಡಿದ್ದು, ಮುಂದೆ ಕಾಮಗಾರಿ ಇನ್ನಷ್ಟು ವೇಗದಲ್ಲಿ ಪೂರ್ಣಗೊಳಿಸಲು ಕಸಾಪ ಜಿಲ್ಲಾಧ್ಯಕ್ಷರ ಆಶಯದ ಮೇರೆಗೆ ಶೀಘ್ರವೇ ಸಹಕರಿಸುವುದಾಗಿ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಮಕ್ಕಳ ಭಾಷಾ ಸಂಸ್ಕೃತಿ ಹೆಚ್ಚಿಸಲು ಹಾಗೂ ಸಾಹಿತ್ಯಾತ್ಮಕ ಚಟುವಟಿಕೆ ನಡೆಸಲು ಭವನದಲ್ಲಿ ಗ್ರಂಥಾಲಯದ ಅವಶ್ಯಕತೆ ಬಹಳಷ್ಟಿದೆ. ಹೀಗಾಗಿ ಶಾಸಕರು ಮೂರು ತಿಂಗಳೊಳಗೆ ಬೋಜನ ಹಾಗೂ ಗ್ರಂಥಾಲಯ ಕೊಠಡಿಗೆ ಇನ್ನಷ್ಟು ಅನುದಾನ ಬಿಡುಗಡೆ ಗೊಳಿಸಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಮಾತನಾಡಿ, ನಾಡಿನ ಭಾಷಾ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಸಾಹಿತ್ಯ, ಸಂಸ್ಕೃತಿ ಹಾಗೂ ಯುವ ಬರಹಗಾರರಿಗೆ ಪೆÇ್ರೀತ್ಸಾಹಿಸಲು ಪ್ರೇರಪಿಸಬೇಕು. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಕಲಿತು ಅತಿ ಹೆಚ್ಚುಗಳಿಸಿದ ವಿದ್ಯಾರ್ಥಿಗಳಿಗೆ ಕಸಾಪ ಸದಾ ಸಹಕರಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಅತಿ ಹೆಚ್ಚು ಗಳಿಸಿದ ಸುಮಾರು 200 ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ವೆಂಕಟೇಶ್, ಜಿ.ಬಿ.ಪವನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷಿ, ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ನಗರಾಧ್ಯಕ್ಷೆ ರೂಪಾನಾಯ್ಕ್, ಸಮಾಜ ಸೇವಕ ಪಿ.ಟಿ.ಸುರೇಶ್ ಉಪಸ್ಥಿತರಿದ್ದರು.



