ಮೂಡಿಗೆರೆ ತಾಲೂಕಿನ ಜೇನುಬೈಲ್ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಚರ್ ಓರ್ವರು ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಅದನ್ನು ತೆರವುಗೊಸಬೇಕೆಂದು ಜೇನುಬೈಲ್ ಗ್ರಾಮಸ್ಥ ತಾರೇಶ್ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸ ಮಾಡುತ್ತಿರುವ ಉದಯ್ ಎಂಬುವರು ಜೇನುಬೈಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಬದಿಯಲ್ಲಿ ಹಳೆ ಕಟ್ಟಡ ದುರಸ್ತಿಪಡಿಸುವುದಾಗಿ ಸ್ಥಳೀಯ ಗ್ರಾ.ಪಂ.ಯಿಂದ ಪರವಾನಗಿ ಪಡೆದು ಅಕ್ರಮವಾಗಿ ಹೊಸ ವಾಣಿಜ್ಯ ಕಟ್ಟಡ ನಿರ್ಮಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ. ಪಿಡಿಒ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ತನ್ನ ಮೇಲೆ ಹಗೆ ಸಾಧಿಸಲು ಕಳೆದ ಜೂ.19ರಂದು ತನ್ನ ಮೇಲೆ ಕತ್ತಿ ಹಿಡಿದು ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ತಾನು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅವರು ಕೂಡ ತನ್ನ ವಿರುದ್ಧ ಪ್ರತಿದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ ಗಲಭೆ ಬಿಡಿಸಿದ ಗ್ರಾಮಸ್ಥರ ಮೇಲೆಯೋ ಅವರು ದೂರು ನೀಡಿರುವುದು ಸರಿಯಲ್ಲ ಎಂದು ಹೇಳಿದರು.
ಉದಯ್ ಅವರು ಹೊಯ್ಸಳಲು ಗ್ರಾಮದ ಸರ್ವೆ ನಂಬರ್ 105ರಲ್ಲಿ ಸುಮಾರು 10 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಭೂಮಿ ಪಹಣಿಯಲ್ಲಿ ದಟ್ಟ ಅರಣ್ಯ ಮತ್ತು ದನಗಳ ಮುಪ್ಪತ್ತು ಎಂದು ನಮೂದಾಗಿದೆ. 1 ಗುಂಟೆ ಅರಣ್ಯ ಭೂಮಿಯಲ್ಲಿ ಗಿಡಗಳನ್ನು ಹಾಕಿದರೆ ಮುಲಾಜಿಲ್ಲದೇ ಕೊತ್ತೊಗೆಯುವ ಅರಣ್ಯ ಅಧಿಕಾರಿಗಳು, ಇಲ್ಲಿ ಸುಮಾರು 10 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಅಕ್ರಮ ಕಟ್ಟಿರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸುವ ಜತೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಜಮೀನನ್ನು ವಶಪಡಿಸಿಕೊಳ್ಳಬೇಕು. ಇಲ್ಲವಾದರೆ ನಿವೇಶನ ರಹಿತರಿಗೆ ಮೀಸಲಿರಿಸಬೇಕೆಂದು ಆಗ್ರಹಿಸಿದರು.
ಜೇನುಬೈಲು ಗ್ರಾಮಸ್ಥರಾದ ಕುಮಾರೇಗೌಡ, ಸುರೇಶ್, ನಿಶಾಂತ್, ಮಹೇಶ್ ಉಪಸ್ಥಿತರಿದ್ದರು.



