ಕನ್ನಡದ ಹಿರಿಯ ಪ್ರಾಧ್ಯಾಪಕ, ಮೂಡಿಗೆರೆ ಪಟ್ಟಣ ನಿವಾಸಿ ಡಾ. ಸುಂದರೇಶ್ ಎಸ್. (58 ವರ್ಷ) ಅಕಾಲಿಕವಾಗಿ ನಿಧನಹೊಂದಿದ್ದಾರೆ. ಪ್ರಸ್ತುತ ಹಾಸನ ವಿಜ್ಞಾನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಂದರೇಶ್ ಅವರು ಅನಾರೋಗ್ಯದಿಂದ ಸೋಮವಾರ ಸಂಜೆ ಚಿಕ್ಕಮಗಳೂರು ಕೆ ಆರ್ ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಂದರೇಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಮೂಲತಃ ಮೂಡಿಗೆರೆ ತಾಲ್ಲೂಕು ಮೇಕನಗದ್ದೆ ಗ್ರಾಮದ ಶಿಕ್ಷಕರಾಗಿದ್ದ ದಿವಂಗತ ಸಿದ್ದಯ್ಯನವರ ಪುತ್ರರಾದ ಸುಂದರೇಶ್ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬೇಲೂರು ವೈಡಿಡಿ ಪದವಿ ಕಾಲೇಜು, ಪಂಚನಹಳ್ಳಿ ಕಾಲೇಜು, ಚಿಕ್ಕಮಗಳೂರು ಐ ಡಿ ಎಸ್ ಜಿ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುವಾಗಿದ್ದರು.
ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. ಉತ್ತಮ ವಾಗ್ಮಿಯಾಗಿದ್ದರು. ಮೂಡಿಗೆರೆ ತಾಲ್ಲೂಕಿನ ಸ್ಥಳನಾಮಗಳು ಎಂಬ ವಿಚಾರದ ಬಗ್ಗೆ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಪಡೆದಿದ್ದರು.
ಸುಂದರೇಶ್ ಅವರ ಪತ್ನಿ ಶ್ರೀಮತಿ ಮಂಜುಳಾ ಅವರು ಮೂಡಿಗೆರೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು, ಪ್ರಸ್ತುತ ಅವರು ಚಿಕ್ಕಮಗಳೂರು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿದ್ದಾರೆ.
ಸುಂದರೇಶ್ ಅವರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧುಗಳು, ಸ್ನೇಹಿತರು, ಶಿಷ್ಯವೃಂದವನ್ನು ಅಗಲಿದ್ದಾರೆ. ಸುಂದರೇಶ್ ಇವರ ಅಕಾಲಿಕ ನಿಧನಕ್ಕೆ ಅವರ ಸ್ನೇಹಿತ ಬಳಗ, ಶಿಷ್ಯವೃಂದ ಕಂಬನಿ ಮಿಡಿದಿದೆ.
ಮೂಡಿಗೆರ ವಿದ್ಯಾನಗರದ ಅವರ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಇಂದು ಮಂಗಳವಾರ ಸಂಜೆ 3 ಗಂಟೆಗೆ ಮೂಡಿಗೆರೆ ಬೀಜುವಳ್ಳಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.



