ನಿವೇಶನ ರಹಿತರಿಗೆ ಭೂಮಿ ಹಾಗೂ ಗ್ರಾಮದಲ್ಲಿ ಸ್ಮಶಾನ ಭೂಮಿಯನ್ನು ಕಾಯ್ದಿರಿಸುವಂತೆ ಒತ್ತಾಯಿಸಿ ಮೂಡಿಗೆರೆ ತಾಲ್ಲೂಕು ಕುನ್ನಹಳ್ಳಿ ಗ್ರಾಮದ ನಿವೇಶನ ಮತ್ತು ಭೂ ರಹಿತರ ಹೋರಾಟ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ಚಿನಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐ ತಾಲೂಕು ಅಧ್ಯಕ್ಷ ರಮೇಶ್ ಕೆಳಗೂರು ಮಾತನಾಡಿ, ಕೆಲ್ಲೂರು ಗ್ರಾಮದ ಸ.ನಂ.82ರಲ್ಲಿ 1991-92ರಲ್ಲಿ ಸರಕಾರದಿಂದ 1 ಎಕರೆ ಸ್ಮಶಾನಭೂಮಿಗಾಗಿ ಮಂಜೂರಾಗಿದ್ದು ಪಹಣಿಯು ಸಹ ಬರುತ್ತಿದ್ದು, ಅಲ್ಲದೇ ಕುನ್ನಹಳ್ಳಿ ಅಂಬೇಡ್ಕರ್ನಗರ ಸ.ನಂ.01ರಲ್ಲಿ 1 ಎಕರೆ ಸ್ಮಶಾನಭೂಮಿಗಾಗಿ ಕಾಯ್ದಿರಿಸಿದ್ದ ಈ ಎರಡೂ ಕಡೆ ಸ್ಮಶಾನ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿದ್ದು ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಕೆಲ್ಲೂರು ಗ್ರಾಮದ ಸ.ನಂ.82ರಲ್ಲಿ ಖಾಲಿ ಇರುವ 4.38 ಎಕರೆ, ಕುನ್ನಹಳ್ಳಿ ಗ್ರಾಮದ ಸ.ನಂ.01ರಲ್ಲಿ ಮತ್ತು ಮೂಡಿಗೆರೆ ಗ್ರಾಮದ ಸ.ನಂ.289ರಲ್ಲಿ ಖಾಲಿ ಇರುವ ಸರಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ಹಾಗೂ ಗ್ರಾಮದ ವಿವಿಧ ಮೂಲಭೂತ ಸೌಕರ್ಯಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 80 ವರ್ಷದ ಸಂಭ್ರಮಾಚರಣೆಯಲ್ಲಿದ್ದೇವೆ. ಆದರೆ ತಲತಲಾಂತರದಲ್ಲಿ ಇಲ್ಲಿಯೇ ಹುಟ್ಟಿ ಬೆಳೆದ ಬಡವರು ಸೂರಿಲ್ಲದೇ ಜೀವನ ಸಾಗಿಸುವಂತಾಗಿದೆ. ಇದು ಮೀಸಲು ಕ್ಷೇತ್ರ. ಇಲ್ಲಿ 55 ವರ್ಷ ದಲಿತ ಶಾಸಕರು ಆಡಳಿತ ನಡೆಸಿದ್ದರೂ ಇಂದಿಗೂ ದಲಿತರು ನಿವೇಶನ ವಂಚಿತರಾಗಿರುವುದು ನಾಚಿಗೇಡಿನ ಸಂಗತಿ. ತಾಲೂಕಿನಲ್ಲಿರುವ ಅಕ್ರಮ ಒತ್ತುವರಿ ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಹರೀಶ್ ಕೆಲ್ಲೂರು, ಮುಖಂಡರಾದ ಹರೀಶ್ ಸಬ್ಬೇನಹಳ್ಳಿ, ಜನಾರ್ಧನ್, ಪೂವಪ್ಪ, ಶೇಖರ್, ವಿಶ್ವ, ನಾರಾಯಣ, ಗಿರೀಶ್, ದೇಜಪ್ಪ, ಚಂದ್ರೇಶ್, ಕೃಷ್ಣ ಮತ್ತಿತರರಿದ್ದರು.


