ಅರಣ್ಯ ಸಂಪತ್ತು, ಪ್ರಕೃತಿ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಕಠಿಣ ಕಾಯಕದಲ್ಲಿ ತಮ್ಮ ಜೀವವನ್ನೇ ಅರ್ಪಿಸಿದ ಅರಣ್ಯ ಇಲಾಖೆಯ ಹುತಾತ್ಮ ಸಿಬ್ಬಂದಿ ಮತ್ತು ಅಧಿಕಾರಿಗಳ ತ್ಯಾಗ ಹಾಗೂ ಧೈರ್ಯ ನಮಗೆಲ್ಲರಿಗೂ ಸದಾ ಪ್ರೇರಣದಾಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ಚಿಕ್ಕಮಗಳೂರು ನಗರದ ಶ್ರೀನಿವಾಸನಗರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯವನ್ನು ರಕ್ಷಿಸುವುದು, ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಮಾತ್ರವಲ್ಲದೆ ವನ್ಯಜೀವಿಗಳಿಂದ ಜನರನ್ನು ಹಾಗೂ ಜನರಿಂದ ವನ್ಯಜೀವಿಗಳನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇಲಾಖೆಯ ಮೇಲಿದೆ. ಶೇ.50 ರಷ್ಟು ಸಿಬ್ಬಂದಿ ಕೊರತೆಯಿದ್ದರೂ ಅರಣ್ಯ ಸಿಬ್ಬಂದಿ ಸಮಯದ ಹಂಗಿಲ್ಲದೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಅರಣ್ಯ ಸಿಬ್ಬಂದಿಯ ಕಾರ್ಯ ಕೇವಲ ಉದ್ಯೋಗವಲ್ಲ, ಅದು ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಆಮ್ಲಜನಕ ಮತ್ತು ಜೀವ ವೈವಿಧ್ಯತೆಯನ್ನು ಕಾಯ್ದಿಟ್ಟು ಕೊಡುವ ಮಹತ್ತರ ಸೇವೆಯಾಗಿದೆ. ಕರ್ತವ್ಯ ನಿರತರಾಗಿದ್ದಾಗ ಪ್ರಾಣತ್ಯಾಗ ಮಾಡಿದ ಅಧಿಕಾರಿಗಳಾದ ಪಿ.ಶ್ರೀನಿವಾಸ್, ಎಸ್.ಎನ್.ಹನುಮಂತಪ್ಪ, ಕಾಳೇಗೌಡ, ಪುಟ್ಟರಾಜು ಬಿ., ಕಾರ್ತಿಕ್ ಕೆ. ಸೇರಿದಂತೆ ನಾಡಿನ ಎಲ್ಲಾ ಅರಣ್ಯ ಹುತಾತ್ಮರ ಸೇವೆಯನ್ನು ಹಾಗೂ ಅವರ ಕುಟುಂಬಸ್ಥರ ತ್ಯಾಗವನ್ನು ಸ್ಮರಿಸಲಾಯಿತು.
ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಅರಣ್ಯವು ನಮ್ಮ ದೇಶದ ದೊಡ್ಡ ಆಸ್ತಿ ಹಾಗೂ ಸಂಪತ್ತಾಗಿದೆ. ಇಂತಹ ಅತ್ಯಮೂಲ್ಯ ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಸವಾಲಿನ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಅರಣ್ಯ ಇಲಾಖೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಹಾಗೂ ಪ್ರಕೃತಿಯ ಸವಾಲುಗಳ ನಡುವೆ ಕೆಲಸ ಮಾಡುವುದು ಅತ್ಯಂತ ಕಷ್ಟಕರವಾಗಿದ್ದು, ಇಂತಹ ಸಂದರ್ಭಗಳಲ್ಲೂ ಸಿಬ್ಬಂದಿಗಳು ತೋರುವ ಬದ್ಧತೆ ಅಭಿನಂದನೀಯ. ಅಲ್ಲದೆ 2013-14 ರಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಇದು ಸಿಬ್ಬಂದಿಯ ಜವಾಬ್ದಾರಿ ಮತ್ತು ಕೊಡುಗೆಯನ್ನು ನೆನಪಿಸುವ ಕಾರ್ಯವಾಗಿದೆ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಣ್ಯ ಇಲಾಖೆಯು ಕೇವಲ ಇಂದಿನ ಪೀಳಿಗೆಗಷ್ಟೇ ಅಲ್ಲದೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುವ ವಿಶಿಷ್ಟ ಇಲಾಖೆಯಾಗಿದೆ ಎಂದು ಹೇಳಿದರು.
1730ರಲ್ಲಿ ರಾಜಸ್ಥಾನದ ಜೋಧ್ಪುರದ ಖೇಜರ್ಲಿಯಲ್ಲಿ ಬಿಷ್ಣೋಯಿ ಸಮುದಾಯದ ಅಮೃತಾದೇವಿ ಹಾಗೂ 363ಕ್ಕೂ ಹೆಚ್ಚು ಜನರು ಮರಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಬಿಷ್ಣೋಯಿ ಸಮುದಾಯದ 29 ನಿಯಮಗಳಲ್ಲಿ ಮರಗಳನ್ನು ಕತ್ತರಿಸದಿರುವುದು ಮತ್ತು ಪ್ರಾಣಿಗಳಿಗೆ ಹಿಂಸೆ ನೀಡದಿರುವುದು ಪ್ರಮುಖ ತತ್ವಗಳಾಗಿವೆ. ಒಂದು ಮರವನ್ನು ಉಳಿಸಲು ಶಿರಚ್ಛೇದವಾದರೂ ಅದು ಅಗ್ಗದ ತೆರವು ಎಂಬುದು ಅವರ ನಿಲುವಾಗಿತ್ತು ಎಂದು ನೆನಪಿಸಿಕೊಂಡರು.
ಅಲ್ಲದೆ, 1983ರಲ್ಲಿ ಉತ್ತರ ಕನ್ನಡದಲ್ಲಿ ನಡೆದ ಐತಿಹಾಸಿಕ `ಅಪ್ಪಿಕೋ ಚಳುವಳಿ’ಯನ್ನು ಉಲ್ಲೇಖಿಸಿ, ಅರಣ್ಯ ರಕ್ಷಣೆಗೆ ಭಾರತದಲ್ಲಿ ಸುದೀರ್ಘ ಇತಿಹಾಸವಿದೆ. ಕೇಂದ್ರ ಸರ್ಕಾರವು 2013ರಿಂದ ಸೆಪ್ಟೆಂಬರ್ 11ನ್ನು `ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ’ವಾಗಿ ಘೋಷಿಸಿದೆ ಎಂದರು.
ಸರ್ಕಾರದ 32-33 ಇಲಾಖೆಗಳು ಪ್ರಸ್ತುತ ಪೀಳಿಗೆಗಾಗಿ ಕೆಲಸ ಮಾಡಿದರೆ, ಅರಣ್ಯ ಇಲಾಖೆ ಒಂದೇ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತದೆ ಎಂದರು. ಸುಮಾರು ಶೇ.50 ರಷ್ಟು ಸಿಬ್ಬಂದಿಯ ಕೊರತೆಯಿದ್ದರೂ, ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ 24ಘಿ7 ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವ-ಪ್ರಾಣಿ ಸಂಘರ್ಷ, ಹವಾಮಾನ ವೈಪರೀತ್ಯ ಹಾಗೂ ತಂತ್ರಜ್ಞಾನದ ಬಳಕೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಸಿಬ್ಬಂದಿಯ ಜೀವ ಮತ್ತು ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಗಸ್ತು ತಿರುಗುವಾಗ ಮತ್ತು ಕಾಡುಪ್ರಾಣಿಗಳ ಎದುರು ಕರ್ತವ್ಯ ನಿರ್ವಹಿಸುವಾಗ ಅಗತ್ಯ ಶಸ್ತ್ರಾಸ್ತ್ರ ಹಾಗೂ ಜಾಗರೂಕತೆಯೊಂದಿಗೆ ತಮ್ಮ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕೀತ್ ಮೀಣಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಮುಂತಾದವರಿದ್ದರು.


