ಗ್ರಾಮದಲ್ಲಿ ಸ್ಮಶಾನಕ್ಕೆಂದು ಸರ್ಕಾರ ಭೂಮಿ ಮೀಸಲಿಟ್ಟಿದ್ದರೂ ಅದನ್ನು ಸ್ಥಳೀಯ ಭೂಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನಕ್ಕಾಗಿ ಮೀಸಲಿದ್ದ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿಕೊಡಿ ಎಂದು ನೂರಾರು ಜನ ಮೂಡಿಗೆರೆ ತಾಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಮೂಡಿಗೆರೆ ತಾಲ್ಲೂಕಿನ ಹಳೆಕೋಟೆ ಗ್ರಾಮದ ಬಿ.ಕೆ.ಸುಂದರೆಶ್ ಬಡಾವಣೆಯ ನಿವಾಸಿಗಳು ಅಖಿಲ ಭಾರತ ಕ್ರಾಂತಿಕಾರಿ ಒಕ್ಕೂಟದ ನೇತೃತ್ವದಲ್ಲಿ ಮೂಡಿಗೆರೆ ತಾಲ್ಲೂಕು ಕಛೇರಿಗೆ ಮೆರವಣಿಗೆ ಮೂಲಕ ಆಗಮಿಸಿ ತಾಲ್ಲೂಕು ಕಛೇರಿ ಎದುರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಬಿ.ಕೆ.ಸುಂದರೆಶ್ ಬಡಾವಣೆಯಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬ ವಾಸವಾಗಿದ್ದು ಅದರಲ್ಲಿ ಎಸ್ಸೀಎಸ್ಟಿ ಜನಾಂಗದವರೇ ಹೆಚ್ಚಿನವರಾಗಿದ್ದಾರೆ. ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದೇ ಅಂತ್ಯಸಂಸ್ಕಾರಕ್ಕೆ ತೊಂದರೆ ಉಂಟಾಗುತ್ತಿದೆ. . ಗ್ರಾಮಸ್ಥರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಪರದಾಟಪಡಬೇಕಾಗಿದ್ದು , ಸ್ಮಶಾನಕ್ಕಾಗಿ ಮೀಸಲಿರಿದ್ದ ಜಾಗವನ್ನು ತಾಲೂಕು ಆಡಳಿತ ಗುರುತು ಮಾಡಿಕೊಡಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.
ಬಡಾವಣೆಯ ಜನರು ಮೃತಪಟ್ಟಾಗ ಖಾಸಗಿ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಉಂಟಾಗಿದೆ. 1999ರಲ್ಲಿ ಹಳೆಕೋಟೆ ಗ್ರಾಮದ ಸ.ನಂ.52ರಲ್ಲಿ ಸ್ಮಶಾನಕ್ಕಾಗಿ 3.10 ಎಕರೆ ಜಾಗ ಸರಕಾರದಿಂದ ಮಂಜೂರಾಗಿದ್ದು, 10 ಗುಂಟೆ ಪರಿಶಿಷ್ಟ ಜಾತಿಯವರಿಗೆ ಮೀಸಲಿರಿಸಲಾಗಿತ್ತು. ಆದರೆ ಅಲ್ಲಿ ಭೂಮಾಲೀಕರು ಜಾಗ ಒತ್ತುವರಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ ಎಂದು ದೂರಿದರು.
ಅದೇ ಸ.ನಂ.ನಲ್ಲಿ 40 ಎಕರೆ ಭೂಮಿಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ತಾ.ಪಂ. ಇಒ ಹೆಸರಿನಲ್ಲಿ 1.20 ಎಕರೆ ಭೂಮಿ ವಿಭಜನೆ ಮಾಡಲಾಗಿದೆ. ಆದರೆ ತಾಲೂಕು ಆಡಳಿತ ಸ್ಮಶಾನಕ್ಕಾಗಿ ಮಂಜೂರಾಗಿದ್ದ 3.10 ಎಕರೆ ಭೂಮಿ ಹಾಗೂ ಸಮುದಾಯ ಭವನಕ್ಕೆ 1.20ಎಕರೆ ಗುರುತಿಸದೇ ಕಾಲ ಹರಣ ಮಾಡಿದೆ.
ಇನ್ನು 15 ದಿನದೊಳಗೆ ಒತ್ತುವರಿದಾರರಿಂದ ಸ್ಮಶಾನ ಭೂಮಿ ತೆರವುಗೊಳಿಸಿ ಜನರಿಗೆ ಅನುಕೂಲ ಕಲ್ಪಿಸದಿದ್ದರೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ಅಲ್ಲಿ ಯಾರಾದರೂ ಮೃತಪಟ್ಟರೆ ತಾಲೂಕು ಕಚೇರಿ ಎದುರೇ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ತಹಸೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.
ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಶೇಖರ್, ಕೃಷ್ಣ ಮಗ್ಗಲಮಕ್ಕಿ, ತಾಲೂಕು ಕಾರ್ಯದರ್ಶಿ ನಾರಾಯಣ, ಆರ್ವೈಎಫ್ಐ ಮುಖಂಡರಾದ ಪ್ರಸಾಧ್, ಸಂತೋಷ್, ಸುರೇಶ್ ಹಾಂದಿ, ಗುರುಪ್ರಸಾಧ್, ಗ್ರಾಮಸ್ಥರಾದ ವಿಠಲ, ದೇಜು, ಸಂತೋಷ್, ಶಿವಪ್ಪ, ರಮೇಶ್, ಸೋಮಯ್ಯ ಮತ್ತಿತರರಿದ್ದರು.


