ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸಮೀಪದ ಹೇಮಾವತಿ ನದಿಯಲ್ಲಿ ಮಹಿಳೆಯ ಶವವೊಂದು ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.
ಮೃತದೇಹವನ್ನು ದಾರದಹಳ್ಳಿ ಗ್ರಾಮದ ದೇವಮ್ಮ (60) ಎಂದು ಗುರುತಿಸಲಾಗಿದೆ. ದೇವಮ್ಮ ಕಳೆದ 3 ದಿನದಿಂದ ಮನೆಯಿಂದ ಕಾಣೆಯಾಗಿದ್ದರು. ದೇವಮ್ಮ ಅವರು ಆಗಾಗ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದರಿಂದ ಅವರ ಪುತ್ರರು ಈಗಲೂ ಯಾವುದೋ ಸಂಬಂಧಿಕರ ಮನೆಗೆ ಹೋಗಿರಬಹುದೆಂದು ಭಾವಿಸಿ ಸುಮ್ಮನಿದ್ದರೆನ್ನಲಾಗಿದೆ.
ಆದರೆ ಇಂದು ದೇವಮ್ಮ ಅವರ ಮೃತ ದೇಹ, ವಾಸದ ಮನೆಯಿಂದ ಸುಮಾರು ಒಂದೂವರೆ ಕಿ,ಮೀ ದೂರದ ಹೇಮಾವತಿ ನದಿಯ ಪಕ್ಕದಲ್ಲಿರುವ ಮರದ ಕೊಂಬೆಯೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮೂಡಿಗೆರೆ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಸಮಾಜ ಸೇವಕ ಫಿಶ್ಮೋಣು ತಂಡದ ಸಹಾಯದಿಂದ ಶವವನ್ನು ಹೊರ ತೆಗೆಯಲಾಯಿತು. ಇದು ಆಕಸ್ಮಿಕ ಸಾವೇ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ಹೊರ ಬೀಳಬೇಕಿದೆ.



