ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆಗಳು ಅರಣ್ಯ ಸಿಬ್ಬಂದಿಗಳನ್ನು ಅಟ್ಟಿಸಿಕೊಂಡು ಬಂದ ಘಟನೆ ನಿನ್ನೆ ನಡಿದಿದೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಜಾವಳಿ ಸಮೀಪದ ಮೇಗೂರಿನ ಅತ್ತಿಗುಣಿ ಹರದಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿತ್ತ. ಈ ವೇಳೆ ಸಿಟ್ಟಿಗೆದ್ದ ಕಾಡಾನೆಯೊಂದು ಸುಮಾರು ದೂರದ ವರೆಗೆ ಅಟ್ಟಿಸಿಕೊಂಡು ಬಂದಿದ್ದು ಅರಣ್ಯ ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಲೆಮನೆ, ಮೇಗೂರು, ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಆನೆ ಕಾರ್ಯ ಪಡೆಯ ಉಪವಲಯ ಅರಣ್ಯಾಧಿಕಾರಿ ಸುಹಾಸ್, ಕಿರಣ್ ಕುಮಾರ್, ದೀಕ್ಷಿತ್, ಕಾರ್ತಿಕ್, ಅಶ್ವಿನ್, ಕರ್ಣ, ಗಸ್ತು ಅಧಿಕಾರಿ ಪರಮೇಶ್ ಗ್ರಾಮಸ್ಥರೊಂದಿಗೆ ಸೋಮವಾರ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವ ವೇಳೆ ಮೇಗೂರಿನ ಅತ್ತಗುಣಿ ಸಮೀಪ ಒಂಟಿ ಸಲಗವೊಂದು ಅಟ್ಟಿಸಿಕೊಂಡು ಬಂದಿದೆ.
ಕಾಡಾನೆಗಳನ್ನು ಕಾಡಿಗಟ್ಟಿದರೂ ಮತ್ತೆ ಮತ್ತೆ ಊರಿನತ್ತ ಮುಖ ಮಾಡುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಮಲೆಮನೆ, ಮೇಗೂರು, ಆಲೇಕಾನ್ ಮುಂತಾದ ಕಡೆಗಳಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಲೆಮನೆ ಸುತ್ತಮುತ್ತ ಪುಂಡಾನೆಯೊಂದು ಬೀಡು ಬಿಟ್ಟಿದ್ದು ಕಾಡಿಗಟ್ಟುವ ವೇಳೆ ಅಟ್ಟಿಸಿಕೊಂಡು ಬರುತ್ತಿದೆ. ಈ ಪುಂಡಾನೆಯನ್ನು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



