ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎನ್. ಅಶ್ವತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 11 ಸದಸ್ಯರನ್ನೊಳಗೊಂಡಿರುವ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯು ಬಹಳ ಜಿದ್ದಾಜಿದ್ದಿನಿಂದ ಕೂಡಿತ್ತು.
ಅಧ್ಯಕ್ಷ ಸ್ಥಾನಕ್ಕೆ ಎಂ.ಎನ್.ಅಶ್ವತ್ ಮತ್ತು ಎಂ.ವಿ.ಸಂದೀಪ್, ಉಪಾಧ್ಯಕ್ಷ ಸ್ಥಾನಕ್ಕೆ ಮೂರ್ತಿ ಮತ್ತು ಮನು ನಾಮಪತ್ರ ಸಲ್ಲಿಸಿದ್ದರು. ನಂತರ ಎಂ.ವಿ. ಸಂದೀಪ್ ಮತ್ತು ಮನು ನಾಪಮತ್ರ ಹಿಂಪಡೆದ ಹಿನ್ನಲೆಯಲ್ಲಿ


ಅಧ್ಯಕ್ಷರಾಗಿ ಎಂ.ಎನ್.ಅಶ್ವತ್ ಮತ್ತು ಉಪಾಧ್ಯಕ್ಷರಾಗಿ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಕಲ್ಲೇಶಪ್ಪ ಕರ್ತವ್ಯ ನಿರ್ವಹಿಸಿದರು.
ಎಂ.ಎನ್. ಅಶ್ವತ್ ಅವರು ಎರಡನೇ ಬಾರಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಈ ಹಿಂದೆ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಮೂಡಿಗೆರೆ ಎ.ಪಿ.ಎಂ.ಸಿ. ಮತ್ತು ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಶ್ವತ್ ಮಾತನಾಡಿ, ತನ್ನ ಅವಧಿಯಲ್ಲಿ ಬ್ಯಾಂಕ್ ವ್ಯವಸ್ಥೆ ಮೇಲ್ದರ್ಜೆಗೆ ಏರಿಸಬೇಕು. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ದೊರೆಯುವಂತಹ ಸೌಲಭ್ಯ ನಮ್ಮ ಸಹಕಾರಿ ಬ್ಯಾಂಕ್ನಲ್ಲಿ ಒದಗಿಸಲು ಶ್ರಮ ವಹಿಸಲಾಗುವುದು. ಬ್ಯಾಂಕ್ ಆರಂಭಗೊಂಡ ಬಳಿಕ ಚಿನ್ನದ ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ವೇಳೆ ಸಹಕಾರ ಸಂಘದ ನಿರ್ದೇಶಕರಾದ ಜಿ.ಯು.ಚಂದ್ರೇಗೌಡ, ಎಂ.ಎಲ್.ಕಲ್ಲೇಶ್, ಎಂ.ವಿ.ಸಂದೀಪ್, ಮನು, ಎನ್.ಎಸ್.ದೇವಿಪ್ರಸಾದ್, ಡಿ.ಸಿ.ಶೃತಿ ಶಶಿಕರಣ್, ಬಿ.ಪಿ.ಮಂಜುಳ ಪ್ರಹ್ಲಾದ್, ಎನ್.ಟಿ.ಅಣ್ಣಪ್ಪ, ಜಿ.ವಿ.ರವಿಕಿರಣ್ ಮತ್ತಿತರರಿದ್ದರು.



