ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಶಾರ್ಪ್ ಶೂಟರ್, ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರ ವೆಂಕಟೇಶ್ ಅವರ ಪುತ್ರ ನೀಡಿದ ದೂರಿನ ಅನ್ವಯ ಮೂವರು ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವೆಂಕಟೇಶ್ ಅವರ ಪುತ್ರ ಮಿಥುನ್ ಕುಮಾರ್ ನೀಡಿದ ದೂರಿನ ಮೇರೆಗೆ ಹಾಸನ ಡಿ.ಎಫ್.ಓ., ಎ.ಸಿ.ಎಫ್. ಹಾಗೂ ಆರ್.ಎಫ್.ಓ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೆಂಕಟೇಶ್ ಪುತ್ರ ನೀಡಿದ ದೂರಿನಲ್ಲಿ ಆನೆಗೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲು ಗುರುವಾರ ಮಧ್ಯಾಹ್ನ ನನ್ನ ತಂದೆ ವೆಂಕಟೇಶ್ ಅವರನ್ನು ಕರೆಸಿದ್ದರು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷತೆ ಹಾಗೂ ಮುಂಜಾಗ್ರತೆ ವಹಿಸದಿದ್ದುದರಿಂದಲೇ ದುರ್ಘಟನೆ ನಡೆದಿದೆ. ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಸನ ಎಸ್ಪಿ ಹರಿರಾಂ ಶಂಕರ್ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಹಾಸನ ಜಿಲ್ಲೆ ಆಲೂರು ಸಮೀಪ ಹಳ್ಳಿಯೂರು ಎಂಬಲ್ಲಿ ಗುರುವಾರ ಗಾಯಗೊಂಡಿದ್ದ ಕಾಡಾನೆಯೊಂದಕ್ಕೆ ಚಿಕಿತ್ಸೆ ನೀಡಲೆಂದು ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿದ್ದ ವೆಂಕಟೇಶ್ ಅವರ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿತ್ತು.



