ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸರಕು ಸಾಗಣೆ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದಿದೆ. ನಿನ್ನೆ ರಾತ್ರಿ ಸಮಯದಲ್ಲಿ ಚಾರ್ಮಾಡಿ ಘಾಟ್ ಅಣ್ಣಪ್ಪಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಜನರು ಚಾರ್ಮಾಡಿ ದೃಶ್ಯವನ್ನು ವೀಕ್ಷಿಸುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿರುತ್ತಾರೆ. ಲಾರಿಯೂ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು ಪ್ರಪಾತಕ್ಕೆ ಜಾರಿದೆ.
ಲಾರಿಯು ಪುತ್ತೂರು ಮೂಲದ ದಿನೇಶ್ ಎಂದು ತಿಳಿದುಬಂದಿದೆ. ‘ಬಿಂದು’ ತಂಪುಪಾನಿಯಾ ವನ್ನು ಹೊತ್ತೊಯ್ಯುತ್ತಿದ್ದ ಲಾರಿ ನಿನ್ನೆ ರಾತ್ರಿ ಪುತ್ತೂರಿನಿಂದ ಹಗರಿಬೊಮ್ಮನಹಳ್ಳಿ ಕಡೆಯಿಂದ ದಕ್ಷಿಣ ಕನ್ನಡ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ. ಲಾರಿಯ ಮಾಲೀಕರೇ ಲಾರಿಯನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ಲಾರಿ ಉರುಳಿದ ಜಾಗದಲ್ಲಿ ಆಳವಾದ ಪ್ರಪಾತವಿದೆ. ಆದರೆ ಲಾರಿ ಮರವೊಂದಕ್ಕೆ ಸಿಲುಕಿಕೊಂಡಿದ್ದರಿಂದ ಪ್ರಪಾತಕ್ಕೆ ಬೀಳುವುದು ತಪ್ಪಿದೆ. ಚಾರ್ಮಾಡಿ ಘಾಟ್ ನಲ್ಲಿ ದಟ್ಟ ಮಂಜು ಕವಿದದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ನೆರವಿಗೆ ಬಂದ ಅಂಬುಲೆನ್ಸ್ ಡ್ರೈವರ್
ಲಾರಿ ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯ ನಂತರ ಡ್ರೈವರ್ ಸಾವರಿಸಿಕೊಂಡು ರಸ್ತೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಕಡೆಗೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆ ಅಂಬುಲೆನ್ಸ್ ರವಿ ಅವರು ಲಾರಿ ಡ್ರೈವರ್ ನೆರವಿಗೆ ಬಂದಿದ್ದಾರೆ. ಪೋನ್ ಮೂಲಕ ಅವರ ಮನೆಯವರಿಗೆ ಮತ್ತು ಬಣಕಲ್ ಠಾಣೆಗೆ ವಿಷಯ ಮುಟ್ಟಿಸಿ ಸಹಾಯ ಮಾಡಿದ್ದಾರೆ.
ಚಾರ್ಮಾಡಿ ರಸ್ತೆಯಲ್ಲಿ ದಟ್ಟವಾದ ಮಂಜು ಕವಿಯುತ್ತಿದ್ದು, ಇತ್ತೀಚೆಗೆ ಸರಣಿ ಅಪಘಾತ ಸಂಭವಿಸಿತ್ತು. ಇಲ್ಲಿ ವಾಹನ ಚಲಾಯಿಸುವವರು ಜಾಗರೂಕತೆಯಿಂದ ಚಲಾಯಿಸಬೇಕಾಗಿದೆ.



