ಮೂಡಿಗೆರೆ ತಾಲೂಕಿನ ಮೂಲರಹಳ್ಳಿ, ಗುತ್ತಿಹಳ್ಳಿ ಸಂಪರ್ಕ ರಸ್ತೆ ಸುಮಾರು 3 ಕಿ,ಮೀ ರಸ್ತೆ ಸಂಪೂರ್ಣ ಗುಂಡಿ ಗೊಟರುಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಶಾಸಕರು ಇತ್ತ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿ ಪಡಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಿನಯ್ ಮೂಲರಹಳ್ಳಿ ಗ್ರಾಮಸ್ಥರ ಪರವಾಗಿ ಆಗ್ರಹಿಸಿದ್ದಾರೆ.
ಈ ಸಂಬಂಧ ಗ್ರಾಮದ ವಿನಯ್ ಮಾತನಾಡಿ ಅತಿವೃಷ್ಟಿ ಪೀಡಿತ ಪ್ರದೇಶವಾಗಿರುವ ಮೂಲರಹಳ್ಳಿ, ಗುತ್ತಿಹಳ್ಳಿ ರಸ್ತೆ ದುರಸ್ತಿ ಕಂಡು ಅನೇಕ ವರ್ಷಗಳೆ ಕಳೆದಿವೆ. ರಸ್ತೆ ದುರಸ್ತಿ ಕಾಣದ ಹಿನ್ನಲೆಯಲ್ಲಿ ಗ್ರಾಮಸ್ಥರೇ ಸೇರಿ ಪ್ರತಿ ವರ್ಷ ರಸ್ತೆಗೆ ಮಣ್ಣು ಹಾಕಿ, ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಸುಗಮಗೊಳಿಸಿದ್ದರು. ಆದರೆ ಈ ವರ್ಷ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಗುಂಡಿಗಳಾಗಿ ವಾಹನ ತಿರುಗಾಡದಂತಾಗಿದೆ. ಅಲ್ಲದೇ ಈ ಗ್ರಾಮಕ್ಕೆ ಈ ಹಿಂದೆ ಸರಕಾರಿ ಬಸ್ಸು ಕೂಡ ಆಗಮಿಸುತ್ತಿತ್ತು. ಆದರೆ ರಸ್ತೆ ಸರಿಯಿಲ್ಲದ ಕಾರಣ ಸರಕಾರಿ ಬಸ್ಸು ಕೂಡ ಕಳೆದ 3 ತಿಂಗಳಿಂದ ಬಾರದಂತಾಗಿದೆ.
ಈ ಗ್ರಾಮಗಳಲ್ಲಿ ಸುಮಾರು 50 ಕ್ಕೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮನೆ ಸೇರಿದಂತೆ ಇತರೇ ವರ್ಗದ 100 ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಗ್ರಾಮದ ಮಕ್ಕಳು ಶಾಲೆಗೆ ತೆರಳಲು, ರೋಗಿಗಳು ಹಾಗೂ ಗ್ರಾಮಸ್ಥರು ಪಟ್ಟಣಕ್ಕೆ ತೆರಳಲು ಸುಮಾರು 3 ಕಿ,ಮೀ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದೆ.
ಜಿ.ಪಂ. ಅಧಿಕಾರಿಗಳಿಗೆ ರಸ್ತೆ ದುರಸ್ತಿಪಡಿಸಿ ಕೊಡಿ ಎಂದು ಕೇಳಿಕೊಂಡರೆ ನಮಗೆ 1 ಲೋಡ್ ಮಣ್ಣು ಹಾಕಲು ಕೂಡ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕ್ಷೇತ್ರದ ನೂತನ ಶಾಸಕರು ಈ ಬಗ್ಗೆ ಗಮನ ಹರಿಸಿ ಮೊದಲು ಗ್ರಾಮದ ರಸ್ತೆ, ಕುಡಿಯುವ ನೀರು ಸೇರಿದಂತೆ ಮುಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.



