ನಮ್ಮ ದೇಶದಲ್ಲಿ ಹಿಂದೂಗಳನ್ನು ಹೀಯಾಳಿಸುವ ಮನಸ್ಥಿತಿಯ ಜನರು ಹೆಚ್ಚಾಗಿದ್ದಾರೆ. ಆದರೆ ಹಿಂದೂ ಧರ್ಮವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಆನಾದಿಕಾಲದಿಂದ ಬಂದಿರುವ ಜಗತ್ತಿಗೆ ಮಾರ್ಗದರ್ಶನ ಮಾಡಿದ ಧರ್ಮ. ಕೆಲವರು ಹಿಂದೂ ಧರ್ಮದ ಹಿರಿಮೆಯನ್ನು ಸರಿಯಾಗಿ ಅರ್ಥೈಸಿ ಕೊಳ್ಳದೇ ಅದನ್ನು ಅವಹೇಳನ ಮಾಡುವ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಕೆಲವರಿಗೆ ಹಿಂದೂ ಧರ್ಮ ತೆಗಳುವುದೇ ಒಂದು ಪ್ರವೃತ್ತಿಯಾಗಿದೆ. ಸನಾತನವಾದ ಹಿಂದೂ ಧರ್ಮ ಬಗ್ಗೆ ಈಗಿನ ಯುವ ಪೀಳಿಗೆಗೆ ತಿಳಿಹೇಳುವ, ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಮತ್ತು ಹಿಂದೂ ಧರ್ಮ ಹೆಮ್ಮೆಯ ಸಂಕೇತವಾದ ಭಗವಧ್ವಜ ಪ್ರತೀ ಹಿಂದೂಗಳ ಮನೆಮೇಲೆ ಹಾರಾಡಬೇಕು, ನಮ್ಮೊಳಗಿನ ಧರ್ಮವಿರೋಧಿಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಬಿ.ಜೆ.ಪಿ. ಹಿರಿಯ ಮುಖಂಡ ದೀಪಕ್ ದೊಡ್ಡಯ್ಯ ಹೇಳಿದ್ದಾರೆ.
ಅವರು ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪಟ್ಟಣದ ಹಿರೇದೇವಿರಮ್ಮ ದೇವಸ್ಥಾನದ ಎದುರು ಭಗವಧ್ವಜ ಹಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮೂಡಿಗೆರೆ ತಾಲೂಕಿನಲ್ಲಿ ಹಿಂದೂ ಸಂಘಟನೆ ಪ್ರಬಲವಾಗಿದೆ. ಇತ್ತೀಚೆಗೆ ಕೆಲವರು ರಾಜಕೀಯ ದುರುದ್ದೇಶದಿಂದ ಭಗವಧ್ವಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ರಾಜಕೀಯಕ್ಕಾಗಿ ಹಿಂದೂಗಳ ನಡುವೆಯೇ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ. ಸನಾತನ ಧರ್ಮದ ಬಗ್ಗೆ ಅರಿವಿಲ್ಲದ ಜನರಿಗೆ ಜಾಗೃತಿ ಮೂಡಿಸಬೇಕಿದೆ. ಮುಖ್ಯವಾಗಿ ಯುವ ಜನಾಂಗ ಸನಾತನ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಜತೆಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಆಗ ಮಾತ್ರ ಹಿಂದೂ ಧರ್ಮ ಇನ್ನಷ್ಟು ಬಲಿಷ್ಟವಾಗಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಹಿಂದೂಗಳಿಗೆ ಕೀಳರಿಮೆ ಉಂಟಾಗಿದೆ. ಇದು ದೊಡ್ಡ ಅಪಾಯ. ಈಗ ನಮ್ಮವರ ಮೇಲೆಯೇ ಚಾಟಿ ಬೀಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅವಕಾಶ ಕೊಡಬಾರದು. ಪ್ರತಿ ಹಿಂದೂಗಳಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಗಂಗನಮಕ್ಕಿಯಲ್ಲಿರುವ ಶ್ರೀ ಗಣಪತಿ, ಪಟ್ಟಣದ ವೇಣುಗೋಪಾಲ ಸ್ವಾಮಿ ಹಾಗೂ ಹಿರೇ ದೇವಿರಮ್ಮ ಬನ ಶ್ರೀ ಅಯ್ಯಪ್ಪ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಪೂಜೆ ನಡೆಸುವ ಮೂಲಕ ದೇವಿರಮ್ಮ ಬನದ ಮುಂದೆ ಭಗವದ್ ಧ್ವಜ ಹಾರಿಸಲಾಯಿತು.
ಹಿಂದೂಪರ ಸಂಘಟನೆಯ ಹಿರಿಯರಾದ ನರೇಂದ್ರ ಜೀ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು, ಬಿ.ಜೆ.ಪಿ. ಮುಖಂಡರುಗಳು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರುಗಳು, ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.


