ಶೃಂಗೇರಿ ತಾಲ್ಲೂಕಿನ ನೆಮ್ಮಾರ್ನ ಸಾಲುಮರ ಎಸ್ಟೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಸಂದರ್ಭದಲ್ಲಿ ಮಂಗಳವಾರ ಜೆಸಿಬಿಯಿಂದ ಮಣ್ಣು ತೆಗೆಯುವಾಗ 4 ಜನ ಕಾರ್ಮಿಕರ ಮೇಲೆ ಮಣ್ಣು ಕುಸಿದು ಓರ್ವ ಸಾವಪ್ಪಿದ್ದಾರೆ.
ಸಾವನ್ನಪ್ಪಿದ ಯುವಕ ಅಸ್ಸಾಂ ಮೂಲದ ನೋಬಿನ್ 23 ವರ್ಷ ಎಂದು ಗುರುತಿಸಲಾಗಿದೆ. ಗಾಯಾಳು ಫೈದುಲ್ಗೆ ಕೈಗೆ ಪೆಟ್ಟಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾರೆ. ರಕೀಬುಲ್ ಖಾನ್ಗೆ ಎರಡು ಕಾಲಿಗೆ ಹೆಚ್ಚು ಪೆಟ್ಟಾಗಿದೆ. ಮೈಬುಲ್ ಖಾನ್ ಬೆನ್ನಿಗೆ ಪೆಟ್ಟಾಗಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವ ಸಂದರ್ಭ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆ ಜೆಸಿಬಿ ಯಂತ್ರ ಬಳಸಿ ಮಣ್ಣು ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಏಕಾಏಕಿ ಮಣ್ಣು ಕುಸಿದಿದೆ. ತಕ್ಷಣವೇ ಮೂವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು,
ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಒಂದು ಗಂಟೆಗಳ ಕಾಲ 3 ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಲಾಗಿತ್ತು. ಕಾರ್ಮಿಕನನ್ನು ಹೊರತೆಗೆದಾಗ ಆತನು ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಕಾರ್ಯಾಚರಣೆ ಹಲವಾರು ತಿಂಗಳಿನಿಂದ ನಡೆಯುತ್ತಿದ್ದು ರಾಜ್ಕಮಲ್ ಗುತ್ತಿಗೆ ಕಂಪೆನಿಗೆ ಸೇರಿದ ಜೆಸಿಬಿ ಕೆಲಸ ಮಾಡುತ್ತೀದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ, ಶೃಂಗೇರಿ ಪೊಲೀಸರು ಭೇಟಿ ನೀಡಿದ್ದರು.
ತಡೆಗೋಡೆ ನಿರ್ಮಾಣ ಮಾಡುವ ಜಾಗದಲ್ಲಿ ಜಲ ಉತ್ಪತ್ತಿಯಾಗಿ ಮಣ್ಣು ಸಡಿಲಗೊಂಡಿದೆ. ಆದರಿಂದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ. ಮಣ್ಣು ಕುಸಿದ ಜಾಗದ ಮೇಲೆ ನಾಲ್ಕು ಮನೆಗಳಿದ್ದು ಅವರನ್ನು ತಾತ್ಕಲಿಕವಾಗಿ ಬಾಡಿಗೆ ಮನೆಯಲ್ಲಿ ಇರಿಸಲು ತಿರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಅರೆಪಾಲಕ ಎಂಜಿನಿಯರ್ ಮಂಜುನಾಥ್ ಕೆ.ವಿ ತಿಳಿಸಿದರು.
ಅಪಾಯ ನಡೆಯುವ ಮುನ್ಸೂಚನೆಯನ್ನು ಸೋಮವಾರ ಸಂಜೆನೆ ಗ್ರಾಮಸ್ಥರು ಎಂಜಿನಿಯರ್ಗೆ ತಿಳಿಸಿದ್ದೇವೆ. ಸ್ವಲ್ಪ ಗುಡ್ಡ ಆಗಲೇ ಕುಸಿದಿತ್ತು. ಎಂಜಿನಿಯರ್ ಮತ್ತು ಗುತ್ತಿಗೆದಾರನ ನಿರ್ಲಕ್ಷದಿಂದ ಈ ಘಟನೆ ಸಂಬವಿಸಿದೆ ಎಂದು ಗ್ರಾಮಸ್ಥರಾದ ಕೃಷ್ಣ, ಗೋಪಾಲ್, ರಜಿನಿ, ತಮ್ಮಣ್ಣ, ರಾಘವೇಂದ್ರರವರು ಆರೋಪಿಸಿದ್ದಾರೆ.



