ಶಾಲಾ ಬಸ್ ಡ್ರೈವರ್ ನ ಪ್ರೇಮದಾಟಕ್ಕೆ ಮುಗ್ದ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ರೈಲಿಗೆ ಸಿಲುಕಿ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ಈ ದುರ್ಘಟನೆ ನಡೆದಿದೆ. ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ (38) ವಿದ್ಯಾರ್ಥಿನಿ ಜಾನವಿ (14) ಮೃತಪಟ್ಟಿದ್ದಾರೆ.

ಅಜ್ಜಂಪುರ ತಾಲ್ಲೂಕು ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಜಾನವಿಯನ್ನ ಆಕೆಯ ಶಾಲೆಯ ಬಸ್ ಡ್ರೈವರ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರೊಂದಿಗೆ ಹೇಳಿಕೊಂಡಿದ್ದಳು. ಕೂಡಲೇ ಪೋಷಕರು ಕೂಡ ಬಸ್ ಡ್ರೈವರ್ ಕಿರುಕುಳದ ಬಗ್ಗೆ ಶಾಲೆಯ ಮುಖ್ಯಸ್ಥರ ಬಳಿ ದೂರು ನೀಡಿದ್ದರು.
ಕಳೆದ ಮೂರು ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿದ್ದ ಸಂತೋಷ ನಿರಂತರ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ಪೋಷಕರಿಂದ ಆತನಿಗೆ ವಾರ್ನಿಂಗ್ ನೀಡಿದ ನಂತರವೂ ಆಕೆಯನ್ನು ಪುಸಲಾಯಿಸಿ ಸ್ನೇಹ ಅಂತೆಲ್ಲ ಹೇಳಿ ಆತ್ಮೀಯತೆ ಬೆಳೆಸಿಕೊಂಡಿದ್ದಾನೆ. ನಿನ್ನೆ ಮನೆಯಿಂದ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆಂದು ಹೋಗುವುದಾಗಿ ಮನೆಯಲ್ಲಿ ಹೇಳಿ ಜಾನವಿ ಮನೆಯಿಂದ ಹೊರಗೆ ಬಂದಿದ್ದಾಳೆ. ಸಂತೋಷ ಆಕೆಯನ್ನು ಕರೆದುಕೊಂಡು ಸುತ್ತಾಡುವುದಕ್ಕೆ ಹೋಗಿದ್ದಾನೆ.
ಆದರೆ, ಜಾನವಿಯನ್ನ ತನ್ನ ಜೊತೆ ಕರೆದೊಯ್ದಿದ್ದ ಸಂತೋಷ ಮಧ್ಯರಾತ್ರಿಯೇ ರೈಲಿಗೆ ಅಡ್ಡನಿಂತುಕೊಂಡು ಇಬ್ಬರು ಸಾವಿಗೀಡಾಗಿದ್ದಾರೆ. ಆದರೆ, ಯಾರೂ ನೋಡದ್ದರಿಂದಾಗಿ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಶಾಲೆಯಲ್ಲಿ ಬಸ್ ಡ್ರೈವರ್ ಬಗ್ಗೆ ದೂರು ನೀಡಿದರೂ ಶಾಲಾ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಶಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತುದ್ದಾರೆ. ಇನ್ನು ರೈಲ್ವೆ ಟ್ರ್ಯಾಕ್ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



