ಹೊಯ್ಸಳರ ಮೂಲಸ್ಥಾನ ಅಂಗಡಿ ಬಳಿಯ ಹಂತೂರು ಗ್ರಾಮದಲ್ಲಿ ಸುಮಾರು 930 ವರ್ಷಗಳ ಹಳೆಯ ಜೈನ ಬಸದಿ ಇತ್ತೆಂಬ ಐತಿಹ್ಯದ ಹಿನ್ನೆಲೆಯಲ್ಲಿ ಅಲ್ಲಿ ಭವ್ಯವಾದ ಆಧುನಿಕ ಜೈನ ಬಸದಿ ಈಗ ಎಲೆಯೆತ್ತಿ ನಿಂತಿದೆ.
ಹೊಯ್ಸಳ ಸಾಮ್ರಾಜ್ಯದ ರಾಜವಂಶಸ್ಥರಿಂದ 1008ನೇ ಕಾಲಾವಧಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಚೈತ್ಯಾಲಯವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಇದೀಗ ಎನ್.ಆರ್.ಪುರ ಬಸ್ತಿಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯಯರ ಮಾರ್ಗದರ್ಶನದಲ್ಲಿ ಹಂತೂರು ಗ್ರಾಮಸ್ಥರು ಹಾಗೂ ಜೈನ ಶ್ರಾವಕ ಬಂಧುಗಳು ಮತ್ತು ಶ್ರೀ ಲಾವಣ್ಯ ಶ್ರೀ ಆರ್ಕಕೀರ್ತಿಜೈನ್ ಮತ್ತು ಮಕ್ಕಳು, ಶೀಥಲ್ ಇಂಜಿನಿಯರ್ಸ್ ಪ್ರೈವೆಟ್ ಲಿಮಿಟೆಡ್, ಎಳನೀರು ಇವರ ನೆರವಿನೊಂದಿಗೆ ಈ ಪ್ರಾಚೀನ ಜಿನಮಂದಿರವನ್ನು ಜೀರ್ಣೋದ್ಧಾರಗೊಳಿಸಲಾಗಿದೆ.
ಇದೀಗ ನೂತನ ಜಿನ ಮಂದಿರದ ಲೋಕಾರ್ಪಣೆ ಕಾರ್ಯ ನಾಳೆ(ಮಾರ್ಚ್ 22) ಯಿಂದ ನೆರವೇರಲಿದೆ.
ಶುಕ್ರವಾರ ಬೆಳಿಗ್ಗೆಯಿಂದ ಪ್ರಾರಂಭವಾಗಿ ಭಾನುವಾರದವರೆಗೆ ವಿವಿಧ ಪೂಜಾ ವಿಧಾನಗಳು, ಧಾರ್ಮಿಕ ಸಮಾರಂಭಗಳು ನೆರವೇರಲಿವೆ.
ಈ ಶುಭ ಕಾರ್ಯದಲ್ಲಿ ಸುತ್ತಲ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಪಾರ್ಶ್ವನಾಥ ಸ್ವಾಮಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಮತ್ತು ಪಂಚಕಲ್ಯಾಣ ಸಮಿತಿ ಹಂತೂರು ಹಾಗೂ ಕಳಸ ಸೀಮೆಯ ಸಮಸ್ತ ಜೈನ ಸಮುದಾಯ ಮತ್ತು ಹಂತೂರು ಗ್ರಾಮಸ್ಥರು ಆಹ್ವಾನಿಸಿದ್ದಾರೆ.





