ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ,
ತೋಟಕ್ಕೆ ಬಂದಿದ್ದ ಆನೆಯನ್ನು ಓಡಿಸುವಾಗ ರೊಚ್ಚಿಗೆದ್ದು ಮನುಷ್ಯನಿಗೆ ತಿವಿದ ಆನೆಯ ಕೊಂಬು ತುಂಡಾಗಿ ನೆಲದಲ್ಲಿ ಹೂತಿದೆ.
ಆನೆ ದಾಳಿಗೆ ಸಿಲುಕಿ ಟಿಂಬರ್ ಕಾರ್ಮಿಕ ದೇಹ ಛಿದ್ರ-ಛಿದ್ರವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೆಬೈಲ್ ಸಮೀಪದ ವರ್ತೆಗುಂಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
35 ವರ್ಷದ ಅಕ್ಬರ್ ಎಂಬುವವರು ಮೃತ ದುರ್ದೈವಿ, ತೋಟದಲ್ಲಿ ಆನೆ ಓಡಿಸುವಾಗ ನಡೆದ ದುರಂತ ಸಂಭವಿಸಿದೆ. ತಣಿಗೆಬೈಲ್ ಅರಣ್ಯ ಇಲಾಖೆಯ ಸಮೀಪದ ಇಂದು ಬೆಳಿಗ್ಗೆ 11-30ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ತೋಟದ ಸುತ್ತ ನಿಂತು ಆನೆ ಓಡಿಸುತ್ತಿದ್ದ ಸ್ಥಳಿಯರ ಮೇಲೆ ರೊಚ್ಚಿಗೆದ್ದು ಏಕಾಏಕಿ ನುಗ್ಗಿದ ಕಾಡಾನೆ ಅಕ್ಬರ್ ಮೇಲೆ ದಾಳಿ ಮಾಡಿದ್ದು, ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಆನೆ ಕಾಲಿಟ್ಟಿದ್ದು, ಅವರ ದೇಹದ ಅಂಗಾಗಗಳು ಛಿದ್ರವಾಗಿದ್ದು, ಕರುಳು ಹೊರಕ್ಕೆ ಬಂದಿದೆ.
ಆನೆಯ ಆಕ್ರೋಶ ಯಾವ ಮಟ್ಟಿಗೆ ಇತ್ತೆಂದರೆ ದೇಹವನ್ನು ದಂತದಲ್ಲಿ ತಿವಿದಿದ್ದು, ನೆಲಕ್ಕೆ ಹೂತ ದಂತವನ್ನ ಮುರಿದುಕೊಂಡಿದೆ. ಆನೆಯ ದಂತ ಮೃತ ದೇಹದ ಪಕ್ಕದಲ್ಲೇ ಬಿದ್ದಿದೆ.

ಮೃತ ಅಕ್ಬರ್ ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಜೀವನಗಳು ಕಾಡಾನೆಗೆ ಬಲಿಯಾಗಿವೆ. ಈಗ್ಗೆ ಮೂರು ದಿನದ ಹಿಂದೆ ಚಿಕ್ಕಮಗಳೂರು ಸಮೀಪದಲ್ಲಿ ತೋಟಕಾರ್ಮಿಕರೊಬ್ಬರು ಕಾಡಾನೆಗೆ ಬಲಿಯಾಗಿದ್ದರು. ಎರಡು ದಿನದ ಹಿಂದೆ ಮಡಿಕೇರಿ ಸಮೀಪ ರೈತರೊಬ್ಬರು ಕಾಡಾನೆಗೆ ಬಲಿಯಾಗಿದ್ದರು. ಇದೀಗ ಟಿಂಬರ್ ಕಾರ್ಮಿಕ ಒಬ್ಬರು ಬಲಿಯಾಗಿದ್ದಾರೆ.
ಕಾಡಾನೆ ಹಾವಳಿ ವಿಪರೀತವಾಗಿದ್ದು, ಜನರು ನಿರಂತರವಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಜನರು ಆಗ್ರಹಿಸುತ್ತಲೇ ಇದ್ದು, ಯಾವುದೆ ಪರಿಹಾರ ಕಾಣದಾಗಿದೆ.



