ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ರಾಷ್ಟ್ರ ಹಿತಕ್ಕಾಗಿ ಮತ ನೀಡಲಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ತಿಳಿಸಿದರು.
ಬುಧವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಪಾತ್ರದಲ್ಲಿ ಮುನ್ನಡೆಸಿದ್ದು, ಜಾಗತಿಕವಾಗಿ 5 ನೇ ಆರ್ಥಿಕ ಶಕ್ತಿಯಾಗಿ ಇಂದು ಭಾರತ ಮೂಡಿಬಂದಿದೆ. 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗಿ ಭಾರತವನ್ನು ಜಾಗತೀಕವಾಗಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸುವುದು ಮೋದಿಜಿಯವರ ಗುರಿಯಾಗಿದೆ ಈ ಕಾರಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕಿದೆ ಎಂದರು.
ಈಗಾಗಲೇ ಭ್ರಷ್ಟಾಚಾರ ರಹಿತವಾಗಿ, ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಪಕ್ಷದ ಮೂಲ ಸಿದ್ಧಾಂತಕ್ಕೆ ಬದ್ಧರಾಗಿ ಭಾರತದ ಆಸ್ಮಿತೆಯನ್ನು ಉಳಿಸುವ ದೃಢ ನಿಶ್ಚಯದಿಂದ ಪ್ರಧಾನಿ ಮೋದಿಯವರು ಆಡಳಿತ ನೀಡಿದ್ದಾರೆ. ಕೋವಿಡ್ ಕಾಲದ ಸಂಕಷ್ಠಗಳನ್ನು ಮೀರಿ ಭಾರತ ಇಂದು ಜಗತ್ತಿನ ಇತರರ ಎಲ್ಲಾ ರಾಷ್ಟ್ರಗಳಿಗಿಂತ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ಜನತೆ ಬಿಜೆಪಿ ಪರ ಒಲವು ತೋರುತ್ತಿದ್ದಾರೆ ಎಂದರು.
ಆಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಕೋಟ್ಯಾಂತರ ಹಿಂದೂಗಳ ಕನಸಾಗಿದ್ದ ಭವ್ಯ ರಾಮಮಂದಿರವನ್ನು ಸರ್ವೋಚ್ಚ ನ್ಯಾಯಲಯದ ತೀರ್ಪಿನ ಮೂಲಕ ನಿರ್ಮಾಣ ಮಾಡಿ 500 ವರ್ಷಗಳ ಹಿಂದುಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಆಡಲಾಗಿದೆ. ಅಲ್ಪ ಸಂಖ್ಯಾತರನ್ನು ಬಹುಸಂಖ್ಯಾತ ಹಿಂದೂಗಳ ವಿರುದ್ಧ ಎತ್ತಿಕಟ್ಟುವ ತುಷ್ಠಿಕರಣ ನೀತಿಯನ್ನು ಜೀವಾಳ ಮಾಡಿಕೊಂಡಿರುವ ಕಾಂಗ್ರೆಸ್ ದೇಶ ದ್ರೋಹಿಗಳು ಭಯೋತ್ಪಾದಕ ಶಕ್ತಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಆ ಪಕ್ಷಕ್ಕೆ ಅಧಿಕಾರ ದೊರೆತರೆ ದೇಶ ವಿನಾಶದ ಅಂಚಿಗೆ ಹೋಗುತ್ತದೆ. ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಈಗಾಗಲೆ ಇದನ್ನು ತೋರಿಸಿಕೊಟ್ಟಿದೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಠಿಕರಣದ ಪರಿಣಾಮ ದಿನ ಬೆಳಗಾದರೆ ಬಹುಸಂಖ್ಯಾತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಬಾಂಬ್ ಸ್ಪೋಟಗಳು ಸೇರಿದಂತೆ ವಿದ್ವಂಸಕ ಕೃತ್ಯಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿವೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ, ಜೈ ಶ್ರೀರಾಂ ಘೋಷಣೆ ಕೂಗಿದವರ ಮೇಲೆ ಬೆದರಿಕೆ ಹಲ್ಲೆ, ಹುಬ್ಬಳ್ಳಿಯ ವಿದ್ಯಾರ್ಥಿನಿಯ ನೇಹಾ ಹಿರೇಮಠ್ ಹತ್ಯೆ, ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್ನ ಹತ್ಯೆಯಂತಹ ಪ್ರಕರಣಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರು ಆತಂಕ ಪಡುವಂತ ಸೃಷ್ಟಿ ನಿರ್ಮಾಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತ ಅನಿಲ್ ಕುಮಾರ್, ಹಿರಿಯ ಮುಖಂಡ ಕೋಟೆ ರಂಗನಾಥ್, ಮಧುಕುಮಾರ ರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.



