ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಮಂಗಳವಾರ ಎಸ್ಐಟಿ ಅಧಿಕಾರಿಗಳು ಹಾಸನದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ ಬಾರ್, ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ ಜೊತೆಗೆ ಬಂಧಿತ ಬಿ.ಜೆ.ಪಿ. ಮುಖಂಡ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೂ ದಾಳಿ ನಡೆಸಿ, ಶಾಕ್ ಮೇಲೆ ಶಾಕ್ ನೀಡಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿ ದೌರ್ಜನ್ಯ ಮತ್ತು ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿಯ ಮಾಜಿ ಶಾಸಕ ಪ್ರೀತಮ್ ಗೌಡರ ಇಬ್ಬರು ಆಪ್ತರನ್ನು ಎಸ್ಐಟಿ ಬಂಧಿಸಿದ್ದು, ಪ್ರೀತಂಗೌಡ ಕಛೇರಿ ಸಿಬ್ಬಂದಿ ಚೇತನ್ ಮತ್ತು ಮತ್ತೊರ್ವ ಆಪ್ತ ಲಿಖಿತ್ ಎಂಬುವವರನ್ನು ಎಸ್.ಐ.ಟಿ.ಸೋಮವಾರ ಬಂಧಿಸಿತ್ತು.
ಇದೀಗ ಎಸ್ಐಟಿ ಪ್ರೀತಮ್ ಗೌಡ ಆಪ್ತರ ಹೋಟೆಲ್ ಹಾಗೂ ಬಾರ್ ಗಳ ಮೇಲೆ ಎಸ್ಐಟಿ ದಾಳಿ ಮಾಡಿದೆ. ಹಾಸನದ ಕ್ವಾಲಿಟಿ ಬಾರ್ ಮತ್ತು ಕೃಷ್ಣಾ ಹೋಟೆಲ್ ಮೇಲೆ ಎಸ್.ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾಸನದ ಎರಡು ಕಡೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಹೋಟೆಲ್ ಹಾಗೂ ಬಾರ್ ಮೇಲೆ ಎಸ್ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಮೇಲೆ ಎಸ್.ಐ.ಟಿ. ತಂಡವು ದಾಳಿ ನಡೆಸಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿರುವ ಡಿಸ್ಕ್ ನ್ನು ಪರಿಶೀಲಿಸುತ್ತಿದೆ. ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಕ್ವಾಲಿಟಿ ಬಾರ್ ನ ಶರತ್ ವಿರುದ್ದ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿದ್ದರೂ ಶರತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದ್ದಾರೆ.
ಇನ್ನು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿರಣ್ ಎಂಬವರ ಒಡೆತನಕ್ಕೆ ಸೇರಿರುವ ಬಾರ್ ಹಾಗೂ ಹೋಟೆಲ್ನಲ್ಲಿ ಎಸ್ಐಟಿ ತಲಾಶ್ ನಡೆಸುತ್ತಿದೆ. ಇನ್ನು ಬಿಜೆಪಿ ಮುಖಂಡ ಪುನಿತ್ ಅವರ ಒಡೆತನಕ್ಕೆ ಸೇರಿದ ಕಛೇರಿ, ಮನೆ ಕೂಡ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹಾಸನದ ರವೀಂದ್ರನಗರದಲ್ಲಿರುವ ವಕೀಲ ದೇವರಾಜೇಗೌಡ ಅವರ ನಿವಾಸದ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇವರಾಜೇಗೌಡ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಎಸ್ ಐ ಟಿ ಈಗಾಗಲೇ ದೇವರಾಜೇಗೌಡ ಅವರನ್ನು ಬಂಧಿಸಿದೆ. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.



