ಕಮಲಾಕ್ಷಮ್ಮ
ಮೂಡಿಗೆರೆ ತಾಲ್ಲೂಕು ಬಿದರಹಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಸಮಾಜಸೇವಕಿ ಶ್ರೀಮತಿ ಟಿ. ಕಮಲಾಕ್ಷಮ್ಮ(77 ವರ್ಷ)ನವರು ನಿಧನ ಹೊಂದಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಿದರಹಳ್ಳಿ ಗ್ರಾಮದ ನಿವೃತ್ತ ಗ್ರಾಮ ಲೆಕ್ಕಿಗ ಬಿ.ಆರ್. ಕೃಷ್ಣಪ್ಪನವರ ಪತ್ನಿಯಾಗಿದ್ದ ಕಮಲಾಕ್ಷಮ್ಮ ಹಲವಾರು ವರ್ಷಗಳಿಂದ ಮೂಡಿಗೆರೆ ಸಾರ್ವಜನಿಕ ಕ್ಷೇತ್ರದಲ್ಲಿ ಮಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಮಾಜಿ ಸಚಿವೆ ಶ್ರೀಮತಿ ಮೋಟಮ್ಮನವರ ಆಪ್ತರಾಗಿದ್ದರು. ರಾಜಕೀಯವಾಗಿ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಅನೇಕ ಸಂಘಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳಾಗಿದ್ದರು. ಮೂಡಿಗೆರೆ ಮಹಿಳಾ ಸೊಸೈಟಿ, ಸಂಚಿಹೊನ್ನಮ್ಮ ಮಹಿಳಾ ಮಂಡಳಿ, ಮಹಿಳಾ ಸಾಂತ್ವಾನ ಕೇಂದ್ರ ಸೇರಿದಂತೆ ಹಲವು ಮಹಿಳಾಪರ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಿದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಮೂಡಿಗೆರೆಯಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ, ಸಾಹಿತ್ಯ, ಜಾನಪದ ಕಾರ್ಯಕ್ರಮಗಳಲ್ಲಿ ಇವರು ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಮಹಿಳಾಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕಮಲಾಕ್ಷಮ್ಮನವರು ಪತಿ ಕೃಷ್ಣಪ್ಪ, ಪುತ್ರ ಧನಂಜಯ ಜೀವಾಳ, ಮೂವರು ಪುತ್ರಿಯರು, ಅಪಾರ ಬಂಧಗಳನ್ನು ಅಗಲಿದ್ದಾರೆ.
ಕಮಲಾಕ್ಷಮ್ಮನವರ ನಿಧನಕ್ಕೆ ಅನೇಕ ಗಣ್ಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯೂ ಇಂದು ಶನಿವಾರ ಸಂಜೆ 4 ಗಂಟೆಗೆ ಸ್ವಗ್ರಾಮ ಬಿದರಹಳ್ಳಿಯಲ್ಲಿ ನೆರವೇರಲಿದೆ



