ಕೆಸ ತರಲು ಹೋದ ಮಹಿಳೆ ಹೇಮಾವತಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಸಂಭವಿಸಿದೆ.
ಕಡಿದಾಳು ಗ್ರಾಮದ ಸುಬ್ಬಮ್ಮ (65) ಮೃತಪಟ್ಟವರು. ಕೆಸ ಕೊಯ್ದು ತರುತ್ತೇನೆಂದು ಶುಕ್ರವಾರ ಬಳೆಗ್ಗೆ 10 ಗಂಟೆಗೆ ಸುಬ್ಬಮ್ಮ ಅವರು, ತನ್ನ ಮಗಳಿಗೆ ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಸುಬ್ಬಮ್ಮ ಸಂಜೆಯಾದರೂ ಮನೆಗೆ ವಾಪಾಸು ಬಂದಿರಲಿಲ್ಲ.
ಇದರಿಂದ ಗಾಬರಿಗೊಂಡ ಮನೆಯವರು ಗ್ರಾಮಾಸ್ಥರ ಸಹಾಯ ಪಡೆದು ಹುಡುಕಲಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಸಮೀಪವಿರುವ ಹೇಮಾವತಿ ನದಿಯಲ್ಲಿ ಸುಬ್ಬಮ್ಮ ಅವರ ಮೃತದೇಹ ಪತ್ತೆಯಾಗಿದೆ.
ಬಳಿಕ ಮೂಡಿಗೆರೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನದಿ ದಡದಲ್ಲಿ ಕೆಸ ಕೊಯ್ಯವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರಬಹುದೆಂದು ಶಂಕಿಸಲಾಗಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಸಾಗಿಸಲಾಗಿದೆ.



