ಚಿಕ್ಕಮಗಳೂರು ಹೊರವಲಯದ ಕೋಟೆ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಸೋಮವಾರ ಸ್ನೇಹಿತರೊಂದಿಗೆ ಕೋಟೆ ಕೆರೆಯಲ್ಲಿ ಈಜು ಕಲಿಯಲು ಹೋದ ಬಾಲಕ ಶಶಾಂಕ್ (13 ವರ್ಷ) ಕೆರೆಯಲ್ಲಿ ಕಾಲು ಹೂತು ಮೇಲೆ ಬರಲಾಗದೇ ಮರಣ ಹೊಂದಿದ್ದಾನೆ.
ಮೃತ ಬಾಲಕ ಎಂಟನೇ ತರಗತಿ ಓದುತ್ತಿದ್ದು, ಚಿಕ್ಕಮಗಳೂರು ನಗರದ ಗಾಂಧಿನಗರ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ನಾಲ್ಕು ಜನ ಸ್ನೇಹಿತರು ಕೋಟೆ ಕೆರೆಗೆ ಈಜು ಕಲಿಯಲು ತೆರಳಿದ್ದರು ಎನ್ನಲಾಗಿದ್ದು, ಈ ಪೈಕಿ ಶಶಾಂಕ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಕೆರೆಯಿಂದ ವಿದ್ಯಾರ್ಥಿ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



