ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಂತ ಗುತ್ತಿಗೆ ಕಂಪನಿಗಳು ಹಾಗೂ ಮಾಲೀಕರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ನಿವೃತ್ತ ಹೊರ ಗುತ್ತಿಗೆದಾರರು ಮಂಗಳವಾರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಕೆ.ಭರತ್ ಮಾತನಾಡಿ, ಇಲ್ಲಿನ ಮೆಸ್ಕಾಂ ಇಲಾಖೆಯಲ್ಲಿ ಅನೇಕ ವರ್ಷದಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನೂರಾರು ಹೊರ ಗುತ್ತಿಗೆದಾರರನ್ನು ತಮ್ಮ ಗುತ್ತಿಗೆ ಅವಧಿ ಮುಗಿದಿದೆ ಎಂದು ಕೆಲಸದಿಂದ ತೆಗೆದು ಹಾಕಲಾಗಿದೆ. ಗುತ್ತಿಗೆ ಪಡೆಯುವ ಕಂಪನಿಗಳು ಸರಕಾರದ ಜತೆ ಕಾನೂನು ಬದ್ಧವಾಗಿ ಮಾಡಿಕೊಂಡ ಒಪ್ಪಂದದಂತೆ ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡಿರುತ್ತಾರೆ. ಆದರೆ ಆ ಒಪ್ಪಂದದ ರೀತಿಯಲ್ಲಿ ಗುತ್ತಿಗೆ ನೌಕರರುಗಳಿಗೆ ಸರಿಯಾದ ಸಮಯಕ್ಕೆ ಸಂಬಳವಾಗಲಿ ಅಥವಾ ಕೆಲಸ ಮಾಡುವ ಸಂದರ್ಭದಲ್ಲಿ ಗಾಯಗಳಾಗುವುದು, ಮರಣ ಹೊಂದಿದರೆ ಯಾವುದೇ ರೀತಿಯಾದ ಪರಿಹಾರ ನೀಡದೇ ಸತಾಯಿಸಲಾಗುತ್ತಿದೆ ಎಂದು ದೂರಿದರು.
ಎಷ್ಟೋ ಮಂದಿ ಕೆಲಸದಲ್ಲಿ ಅವಘಡ ಸಂಭವಿಸಿ ವಿಶ್ರಾಂತಿ ತೆಗೆದುಕೊಳ್ಳುವ ಗುತ್ತಿಗೆದಾರರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಅಲ್ಲದೇ ಗುತ್ತಿಗೆ ತೆಗೆದುಕೊಳ್ಳುವಾಗ ಸರಕಾರ ಖಾಯಂಗೊಳಿಸುತ್ತದೆ ಎಂದು ಸುಳ್ಳು ಆಶ್ವಾಸನೆ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ತಮ್ಮ ಸಮಯ ವ್ಯರ್ಥವಾಗುವ ಜತೆಗೆ ಕುಟುಂಬ ನಿರ್ವಹಣೆ ಮಾಡಲು ಹಾಗೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದೇ ಸಂಕಷ್ಟ ಎದುರಿಸುವಂತಾಗಿದೆ ಸರಕಾರದ ಜತೆ ಮಾಡಿಕೊಂಡಂತ ಒಪ್ಪಂದದಂತೆ ನಡೆದುಕೊಳ್ಳದ ಗುತ್ತಿಗೆ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಹೊರ ಗುತ್ತಿಗೆದಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮಂಜುನಾಥ್ ನಿವೃತ್ತ ಹೊರ ಗುತ್ತಿಗೆದಾರರಾದ ಚಂದ್ರು, ಚಂದ್ರೇಶ್, ಶಶಿಕುಮಾರ್, ಸವಿನ್, ನಾಗೇಶ್, ಪ್ರಮೋದ್, ಜೈಪಾಲ್, ಜಗದೀಪ್ ಮತ್ತಿತರರಿದ್ದರು.



