ಆಧಾರ್ ಕಾರ್ಡ್ ಅಕ್ರಮ ನಡೆಸುತ್ತಿದ್ದ ಅನುಶ್ರೀ ವಿಚಾರಣೆ ನಡೆಸುತ್ತಿರುವ ಹಾಸನ ಡಿಸಿ
ಅಸ್ಸಾಂ ಮತ್ತು ಬಾಂಗ್ಲಾ ಮೂಲದ ಕಾರ್ಮಿಕರಿಗೆ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಜಾಲವೊಂದು ಹಾಸನದಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲಾಧಿಕಾರಿ ಕಛೇರಿಯ ಆಧಾರ್ ಕೇಂದ್ರದಲ್ಲಿಯೇ ಇಂತಹ ಮೋಸದ ಜಾಲ ಕೆಲಸ ಮಾಡುತ್ತಿದ್ದುದು ತನಿಖೆಯಿಂದ ಹೊರಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸತ್ಯಭಾಮ ಅವರು ನೀಡಿದ ದೂರಿನ ಮೇರೆಗೆ ಹಾಸನ ಜಿಲ್ಲಾಧಿಕಾರಿ ಕಛೇರಿ ಆವರಣದ ಆಧಾರ್ ವಿಭಾಗದ ಸಿಬ್ಬಂದಿ ಅನುಶ್ರೀ ಎಂಬಾಕೆಯನ್ನು ಬಂಧಿಸಲಾಗಿದೆ.

ನಕಲಿ ದಾಖಲೆಗಳೊಂದಿಗೆ ಅಸ್ಸಾಂ ಮೂಲದವರೆಂದು ಕಾರ್ಮಿಕರ ರೂಪದಲ್ಲಿ ಬಾಂಗ್ಲಾ ವಲಸಿಗರು ನೆರೆಯೂರುತ್ತಿರುವ ಬಗ್ಗೆ ಗಂಭೀರ ಆರೋಪ ಹಾಸನ ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕೇಳಿಬರುತ್ತಿತ್ತು. ಕೂಲಿ ಕೆಲಸಗಾರರ ಸೋಗಿನಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ಅಸ್ಸಾಂ ಮೂಲದವರೆಂದು ಹೇಳಿಕೊಂಡು ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ವಿವಿಧೆಡೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ಕಾರ್ಮಿಕರ ಕೊರತೆಯನ್ನು ಅರಿತುಕೊಂಡು ಅದನ್ನೇ ಬಂಡವಾಳ ಮಾಡಿಕೊಂಡ ಕೆಲವು ಏಜೆಂಟ್ರಿಂದ ನಕಲೆ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿರುವುದು ಕೇಳಿ ಬಂದಿತ್ತು
ನೂರಾರು ಸಂಖ್ಯೆಯಲ್ಲಿ ಅಪರಿಚಿತರು ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಕೆಲಸ ಹುಡುಕುತ್ತಿದ್ದರು. ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ನಡೆಸದೇ ಕಾರ್ಮಿಕರು ಬೇಕೆಂಬ ಅನಿವಾರ್ಯತೆಯಿಂದಾಗಿ ಕೆಲಸ ನೀಡುತ್ತಿದ್ದರು. ವಲಸಿಗರು ಸಿಕ್ಕ ಸಿಕ್ಕ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸುತ್ತಿರುವುದನ್ನು ಕಂಡು ಜನರಲ್ಲಿ ಅನುಮಾನ ಹೆಚ್ಚಾಗಿತ್ತು. ಸಾವಿರ ಸಂಖ್ಯೆಯಲ್ಲಿ ವಲಸಿಗರು ಬರುತ್ತಿರುವ ಹಿನ್ನೆಲೆ ಅವರ ಬಗ್ಗೆ ನಿಗಾವಹಿಸುವಂತೆ ಜನರು ಆಗ್ರಹಿಸಿದ್ದರು.
ಈ ಆರೋಪದ ಬೆನ್ನಲ್ಲೇ ಆಧಾರ್ ವಿಭಾಗದ ಅಧಿಕಾರಿಗಳು ಬೃಹತ್ ಜಾಲದ ಮಾಹಿತಿಯೊಂದು ಬಯಲು ಮಾಡಿದ್ದಾರೆ. 5 ರಿಂದ 10 ಸಾವಿರ ರೂ. ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುವ ಕುರಿತು ಮಾಹಿತಿಯು ಹೊರಬಿದ್ದಿದೆ.
ಅಕ್ರಮ ವಲಸಿಗರು ಬರುತ್ತಿರುವ ಆರೋಪದ ಹಿನ್ನೆಲೆ ಬೆಂಗಳೂರು ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ಬಳಸಿ ಹತ್ತಾರು ಆಧಾರ್ ವಿತರಣೆ ಮಾಡಿರುವುದು ಬಯಲು ಮಾಡಿ ಶಾಕಿಂಗ್ ಮಾಹಿತಿ ಬಯಲಿಗೆಳಿದಿದ್ದಾರೆ
ಹಾಸನದ ಡಿಸಿ ಕಛೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅನುಶ್ರೀ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಆಧಾರ್ ನೀಡಿರುವ ಮಹಿಳೆಯ ವಿರುದ್ದ ಕೇಸ್ ದಾಖಲಿಸಿ, ತನಿಖೆ ನಡೆಸುವಂತೆ ಮತ್ತು ಈ ಕೇಂದ್ರದಲ್ಲಿ ನೊಂದಣಿ ಆಗಿರುವ ಎಲ್ಲಾ ಆಧಾರ್ ಕಾರ್ಡ್ ಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿ ಸೂಚನೆ ನೀಡಿದ್ದಾರೆ.
ನಕಲಿ ಜನನ ಪ್ರಮಾಣ ಪತ್ರವನ್ನು ಸೃಷ್ಟಿಸಿ ಎಲ್ಲಾ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಇಲ್ಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿತ್ತು ಎನ್ನಲಾಗಿದೆ. ಇದರ ಹಿಂದೆ ದೊಡ್ಡ ಜಾಲವಿದ್ದು ಮತ್ತೆ ಎಷ್ಟು ಕೇಂದ್ರಗಳಲ್ಲಿ ಇಂತಹ ಅಕ್ರಮ ನಡೆಯುತ್ತಿದೆ ಎಂಬುದನ್ನು ಸಮಗ್ರ ತನಿಖೆಯಿಂದ ಪತ್ತೆ ಹಚ್ಚಬೇಕಾಗಿದೆ.



