ಒಂದುಕಡೆ ಅರಣ್ಯದೊಳಗೆ ಹೋಗಿ ಪ್ರಾಣಿಗಳನ್ನು ಶಿಕಾರಿ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದರೆ ಅದಕ್ಕೆ ವ್ಯತಿರಿಕ್ತವಾಗಿ ತನ್ನ ಮನೆಗೆ ಬಂದಿದ್ದ ಪ್ರಾಣಿಯೊಂದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಅಪರೂಪದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಳಗುಂದ ಗ್ರಾಮದ ಕೆ.ಸಿ. ಸುರೇಂದ್ರ ಎಂಬುವವರ ಮನೆಗೆ ಅಪರೂಪದ ಪುನುಗು ಬೆಕ್ಕು ಒಂದು ಬಂದಿತ್ತು. ಪುನುಗು ಬೆಕ್ಕು ಗಾಯಗೊಂಡಿತ್ತು ಎನ್ನಲಾಗಿದೆ. ಮನೆಯವರು ಬೆಕ್ಕನ್ನು ಕಾಡಿಗೆ ಓಡಿಸಲು ಎಷ್ಟೇ ಪ್ರಯತ್ನ ಪಟ್ಟರು ಅದು ಮತ್ತೆ ಮರಳಿ ಮನೆಗೆ ಬರತೊಡಗಿತ್ತು.

ಕೊನೆಗೆ ಅರಣ್ಯ ಇಲಾಖಗೆ ಮಾಹಿತಿ ನೀಡಿ ಪುನುಗು ಬೆಕ್ಕನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಅರಣ್ಯ ಇಲಾಖೆಯವರು ಗಾಯಗೊಂಡಿರುವ ಪುನುಗು ಬೆಕ್ಕಿಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಕಾಡಿಗೆ ಬಿಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಅಪರೂಪದ ಪುನುಗು ಬೆಕ್ಕು ಬೇಟೆಗಾರರ ಗುಂಡಿಗೆ ಬಲಿಯಾಗುವುದೇ ಹೆಚ್ಚು. ಅಂತಹುದರಲ್ಲಿ ಗಾಯಗೊಂಡು ತಾನಾಗಿಯೇ ಮನೆಬಾಗಿಲಿಗೆ ಬಂದ ಅಪರೂಪದ ಪ್ರಾಣಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸುರೇಂದ್ರ ಅವರ ನಡೆಗೆ ಅರಣ್ಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



