ಆಲ್ದೂರಿನ ಪತ್ರಕರ್ತ ಜೋಸೇಫ್ ಅವರು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಆಲ್ದೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಆಲ್ದೂರಿನಿಂದ ಮೂಡಿಗೆರೆ ಶಾಸಕರ ಕಛೇರಿವರೆಗೆ ಏಕಾಂಗಿಯಾಗಿ ಪಾದಯಾತ್ರೆ ಮಾಡಿ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಆಲ್ದೂರು ಅಂಬೇಡ್ಕರ್ ವೃತ್ತದಿಂದ ಕೊರಳಿಗೆ ಸ್ಲೋಗಾನ್ ಹಾಕಿಕೊಂಡು ಒಬ್ಬಂಟಿಯಾಗಿ ಮೂಡಿಗೆರೆ ಶಾಸಕ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸುವುದರ ಮೂಲಕ ತಮ್ಮ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಗುರುವಾರ ಮುಂಜಾನೆ ಆರು ಗಂಟೆಗೆ ಆಲ್ದೂರು ಅಂಬೇಡ್ಕರ್ ಪ್ರತಿಮೆ ಮತ್ತು ನಾಡಪ್ರಭು ಕೆಂಪೇಗೌಡ ಪುತ್ಥಳಿಗಳಿಗೆ ನಮಿಸಿ ಆಲ್ದೂರು ಆಸ್ಪತ್ರೆಯನ್ನು ಉನ್ನತೀಕರಿಸುವಂತೆ ಆಲ್ದೂರಿನಿಂದ ಮೂಡಿಗೆರೆವರೆಗೆ ಒಬ್ಬಂಟಿಯಾಗಿ ಪಾದಯಾತ್ರೆ ನಡೆಸಿ ಶಾಸಕರಾದ ನಯನ ಮೋಟಮ್ಮನವರಿಗೆ ಮನವಿ ಪತ್ರ ಸಲ್ಲಿಸಿದರು.
ಆಸ್ಪತ್ರೆಯನ್ನು ನಿರ್ಮಿಸಿಕೊಡಲು ದಾನಿಗಳು ಸಿದ್ದರಿರುವ ಮಾಹಿತಿಯನ್ನು ಹಂಚಿಕೊಂಡಿದ್ದು ಅದಕ್ಕೆ ಪ್ರತಿಕ್ರಿಯೆ ಶಾಸಕಿ ಮೋಟಮ್ಮ ಅವರು ಸದನದಲ್ಲಿ ಕೂಡ ಆರೋಗ್ಯ ಕೇಂದ್ರದ ಉನ್ನತೀಕರಣ ಕುರಿತು ಚರ್ಚಿಸಿದ್ದೆ ಎನ್ನುವ ಮಾಹಿತಿಯನ್ನು ತಿಳಿಸಿ ಆಸ್ಪತ್ರೆ ನಿರ್ಮಾಣ ಮಾಡಲು ಸಿದ್ದರಿರುವ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಜೋಸೆಪ್ ಅವರು ; ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ 1944 ನೇ ಇಸವಿಯಲ್ಲಿ ಕಟ್ಟಿಸಲಾಗಿದ್ದು 82 ವರ್ಷಗಳು ಪೂರ್ಣಗೊಂಡಿದೆ. ಇದುವರೆಗೂ ಬರೀ ದುರಸ್ತಿ ಮಾತ್ರ ನಡೆಯುತ್ತಿದೆ. ಈ ಹಿಂದೆ ಎಂ.ಪಿ ಕುಮಾರಸ್ವಾಮಿ ಶಾಸಕರಾಗಿದ್ದಾಗ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಉನ್ನತಿಕರಿಸಲು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು ಬಳಿಕ ಆ ಯೋಜನೆ ಕೂಡಿ ಬರಲಿಲ್ಲ.
ಆಲ್ದೂರಿನಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರನಾಗಿ ನಾನು ಕೆಲಸ ಪ್ರಾರಂಭಿಸಿದ ಮೇಲೆ ಈ ಬಗ್ಗೆ ಅನೇಕ ಬಾರಿ ಪತ್ರಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿ, ಸುದ್ದಿಯನ್ನು ಮಾಡಿದೆ. ಆಲ್ದೂರು ಭಾಗದ ಕಾಂಗ್ರೆಸ್ ಮುಖಂಡರ ಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದಾಗ ವೈಯುಕ್ತಿಕವಾಗಿ ತೆರಳಿ, ಆಸ್ಪತ್ರೆಯನ್ನು ಉನ್ನತೀಕರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವಂತೆ ವಿಶೇಷ ಮನವಿ ಮಾಡಿದೆ. ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸುವಂತೆ ಅವರ ಆಪ್ತರು ತಿಳಿಸಿದ ಬಳಿಕ ನಾನು ಆಸ್ಪತ್ರೆಯಿಂದ ದಾಖಲಾತಿಗಳನ್ನು ಒಟ್ಟುಗೂಡಿಸಿ ಅವರ ಬಳಿ ಕಳುಹಿಸಿಕೊಟ್ಟೆ ಆಸ್ಪತ್ರೆಯಿಂದಲೂ ದಾಖಲಾತಿ ಸಿದ್ಧಪಡಿಸಿ ಇಲಾಖೆ ಮೂಲಕ ಕಳುಹಿಸಿಕೊಟ್ಟರು ಇದುವರೆಗೂ ಯಾವುದೇ ಫಲ ಸಿಕ್ಕಿಲ್ಲ.
ಪತ್ರಿಕೆಯ ಜಾಹೀರಾತು ಸಂಬಂಧ ಚಿಕ್ಕಮಗಳೂರಿನ ವಿದ್ಯಾ ಕಾಫಿ ಕ್ಯೂರಿಂಗ್ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಭಟ್ ರವರನ್ನು ಭೇಟಿ ಮಾಡುವ ಅವಕಾಶವನ್ನು ನಮ್ಮೂರಿನ ಮುಖಂಡರು ಕಾಫಿ ಕ್ಯೂರಿಂಗ್ ನ ನಿರ್ವಹಣ ಮುಖ್ಯಸ್ಥರಾದ ಭಾನುಪ್ರಕಾಶ್ ಸಭೆ ಏರ್ಪಡಿಸಿಕೊಟ್ಟಿದ್ದರು. ಆಗ ಶ್ಯಾಮ್ ಪ್ರಸಾದ್ ರವರು ಹಿರೇಮಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಒಂದು ಕೋಟಿ ವೆಚ್ಚದಲ್ಲಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎಂಬಂತೆ ನಿರ್ಮಿಸಿ ಕೊಟ್ಟಿರುವ ಉದಾಹರಣೆಯನ್ನು ತಿಳಿಸಿ ಸಮಾಜಮುಖಿ ಕೆಲಸಗಳನ್ನು ಅವರ ಸಂಸ್ಥೆ ಕಡೆಯಿಂದ ಮಾಡುತ್ತಿರುವ ಮಾಹಿತಿಯನ್ನು ಹಂಚಿಕೊಂಡರು, ಅದರಲ್ಲಿ ಗೋಶಾಲೆ ನಿರ್ಮಾಣವನ್ನು ಮಾಡಿರುವುದನ್ನು ಕೂಡ ಉಲ್ಲೇಖಿಸಿದರು
ಅವರ ಬಳಿ ನಾನು ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಕುರಿತು ಚರ್ಚಿಸಿದೆ, ಕೂಡಲೇ ಸ್ಪಂದಿಸಿದ ಅವರು ಸಂಪೂರ್ಣವಾಗಿ ಕಟ್ಟಡ ನಿರ್ಮಿಸಿ ಕೊಡುವ ಭರವಸೆಯ ಮಾತನ್ನು ಹೇಳಿದರು. ಇದರಿಂದ ಪ್ರೇರೇಪಿತನಾಗಿದ್ದು, ಇದೀಗ ಸರ್ಕಾರವು ಕೈಜೋಡಿಸಿದರೆ ಆಲ್ದೂರಿನ ಜನರ ಬಹುದಿನಗಳ ಕನಸು ನನಸಾಗಬಹುದು. ಈ ಬಗ್ಗೆ ಕ್ಷೇತ್ರದ ಶಾಸಕರು ಮತ್ತು ಸಂಬಂಧಿಸಿದ ಇಲಾಖೆಯ ಸಚಿವರು, ಅಧಿಕಾರಿಗಳು ಮನಸ್ಸು ಮಾಡಬೇಕಾಗಿದೆ ಎಂದರು.
ಒಟ್ಟಾರೆ ಪತ್ರಕರ್ತರ ಸಾಮಾಜಿಕ ಕಾಳಜಿ ಬಗ್ಗೆ ಆಲ್ದೂರಿನ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



