ಅರಣ್ಯ ಕಾಯ್ದೆಯನ್ನು ಸೆಕ್ಷನ್ 4/1 ನೋಟಿಪಿಕೇಷನ್ 17 ಆಗಿ ಪರಿವರ್ತನೆ ಆಗದಂತೆ ತಡೆಹಿಡಿಯಬೇಕು ಎಂದು ಭೂಮಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿ ಮುಖಂಡರು ಗಳು ಗುರುವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ; ಜಿಲ್ಲೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ತಲಾ ತಲಾಂತರದಿಂದ ತಮ್ಮ ಜಮೀನಿನಲ್ಲಿ ಕೃಷಿ ಮತ್ತು ಮನೆಗಳನ್ನು ನಿರ್ಮಿಸಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ 4/1 ಕಾಯ್ದೆಯನ್ನು ನೋಟಿಪಿಕೇಷನ್ ಮೂಲಕ ಸೆಕ್ಷನ್ 17 ಕಾಯ್ದೆಗಳನ್ನಾಗಿ ಪರಿವರ್ತಿಸಿ ಒಕ್ಕಲೆಬ್ಬಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀರ್ಮಾನಿಸಿವೆ. ಸಾವಿರಾರು ನಿವೇಶನ ರಹಿತರು ಮತ್ತು ಅತೀ ಸಣ್ಣ ರೈತ ಕುಟುಂಬಗಳು ಈ ತೀರ್ಮಾನದಿಂದ ಬೀದಿಗೆ ಬೀಳುವ ಸಾಧ್ಯತೆಯಿದೆ. ಅದರಂತೆ ಜಿಲ್ಲೆಯ ಕೊಪ್ಪ, ಶೃಂಗೇರಿ, ನ.ರಾ.ಪುರ, ಕಳಸ, ಬಾಳೆಹೊನ್ನೂರು, ಮೂಡಿಗೆರೆ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶವನ್ನು ತೆರವುಗೊಳಿಸಲು ಉದ್ದೇಶದಿಂದ ಸೆಕ್ಷನ್ 4/1 ನ್ನು 17 ಆಗಿ ಪರಿವರ್ತಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಹೇಳಿದರು.
ಕೂಡಲೇ ಹೊಸ ಕಾನೂನನ್ನು ಪರಿಶೀಲನೆ ಮಾಡಿ ಮುಂದಿನ ಪೀಳಿಗೆಗೆ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ನಿವೇಶನ, ಶಾಲೆ, ಆಟದ ಮೈದಾನ ಮತ್ತು ಇತರೆ ಉದ್ದೇಶಗಳಿಗೆ ಹಾಗೂ ಪ್ರತಿ ಗ್ರಾಮಕ್ಕೆ 25 ಎಕರೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಆದ್ದರಿಂದ ಜಿಲ್ಲಾಡಳಿತ ನೈಜ ವರದಿಯನ್ನು ಸರ್ಕಾರಕ್ಕೆ ನೀಡುವುದರ ಮೂಲಕ ಮುಂದಾಗುವ ಅನಾಹುತಗಳನ್ನು ತಡೆಹಿಡಿದು ರೈತರಿಗೆ ಮತ್ತು ನಿವೇಶನ ರಹಿತರಿಗೆ ನೆರವಿಗೆ ಧಾವಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಸಮಿತಿ ಪ್ರಧಾನ ಕಾರ್ಯದರ್ಶಿ ಹುಣಸೇಮಕ್ಕಿ ಲಕ್ಷ್ಮಣ್, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಮಂಜು, ಮುಖಂಡರುಗಳಾದ ಕೃಷ್ಣಮೂರ್ತಿ, ರವಿ, ಹಚ್ಚಯ್ಯ, ಹೊನ್ನೇಶ್, ನವರಾಜು, ಪುಟ್ಟಸ್ವಾಮಿ ಮತ್ತಿತರರಿದ್ದರು.



