ಬಾಡಿಗೆದಾರರ ಸೋಗಿನಲ್ಲಿ ಬಂದು ಹಿರಿಯ ನಾಗರೀಕರ ಹತ್ಯೆ ಮಾಡಿ, ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು, ರಾಮನಗರ ಸೇರಿದಂತೆ ವಿವಿಧ ಕಡೆ ಇಂತಹ ಕೃತ್ಯಗಳು ದಾಖಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಮಹಿಳೆ ಹಾಗೂ ಪುರುಷರಿಬ್ಬರು ಹಿರಿಯ ನಾಗರೀಕರ ದರೋಡೆ ಮಾಡುತ್ತಿದ್ದು, ಇಬ್ಬರ ಪತ್ತೆಗೆ ರಾಮನಗರ ಜಿಲ್ಲೆಯ ಪೊಲೀಸರು ವಾಂಟೆಡ್ ನೋಟಿಸ್ ಜಾರಿ ಮಾಡಿದ್ದಾರೆ.
ಬಾಡಿಗೆಗಿದೆ(To let) ಎಂಬ ಬೋರ್ಡ್ ಇರುವ ಮನೆಗಳನ್ನು ನೋಡುವ ಆರೋಪಿಗಳು ಬಾಡಿಗೆದಾರರ ಸೋಗಿನಲ್ಲಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಾರೆ. ಮಾಲೀಕರ ಮನೆಗೆ ತೆರಳಿ ಮನೆಯ ಸದಸ್ಯರ ಮಾಹಿತಿ ಕಲೆ ಹಾಕುತ್ತಾರೆ. ಮಾಲೀಕರು ಹಿರಿಯ ನಾಗರೀಕರು ಎಂಬುದು ತಿಳಿದುಬಂದರೆ, ಒಂಟಿ ಮನೆಯಾಗಿದ್ದರೆ ದರೋಡೆಗೆ ಸಂಚು ರೂಪಿಸುತ್ತಾರೆ. ದರೋಡೆ ಬಳಿಕ ಮಾಲೀಕರನ್ನು ಮನೆಯಲ್ಲಿ ಕಟ್ಟಿ ಹಾಕಿ, ಬೀಗ ಹಾಕಿ ಪರಾರಿಯಾಗುತ್ತಿದ್ದಾರೆ. ಇಂತಹುದೇ ತಂಡವೊಂದು ವೃದ್ದೆಯೊಬ್ಬರನ್ನು ಕೊಲೆ ಮಾಡಿರುವ ಬಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ನಿಖರ ಮಾಹಿತಿ ಸದ್ಯ ಪೊಲೀಸರಿಗೆ ಲಭ್ಯವಾಗಿಲ್ಲ.
ಆರೋಪಿಗಳು ತಾವಿದ್ದ ಸ್ಥಳಗಳನ್ನು ಪದೇ ಪದೇ ಬದಲಿಸುತ್ತಿದ್ದು, ವ್ಯವಸ್ಥಿತವಾಗಿ ತಂಡವಾಗಿ ಕುಕೃತ್ಯ ನಡೆಸುತ್ತಿದ್ದಾರೆ. ಹಾಗಾಗಿ ಬಾಡಿಗೆಗೆ ಮನೆ, ಮಳಿಗೆ ಕೇಳಿಕೊಂಡು ಬರುವ ಅಪರಿಚಿತರ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ಅಂತಹವರನ್ನು ಮನೆಯೊಳಗೆ ಸೇರಿಸುವ ಮುನ್ನ ಪೂರ್ವಾಪರ ತಿಳಿದುಕೊಂಡು ವ್ಯವಹರಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



