ದಸರಾ ನವರಾತ್ರಿಯ ನಾಡಹಬ್ಬದ ಅಂಗವಾಗಿ ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಆರದವಳ್ಳಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಹಾಗೂ ಶಾಸಕರ ಸಮ್ಮುಖದಲ್ಲಿ ಗ್ರಾಮದ ಪಟೇಲ ವಂಶಸ್ಥ ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಸಾರಥ್ಯದಲ್ಲಿ ವಿಜಯದಶಮಿಯಂದು ಸಂಪ್ರದಾಯಿಕ ಪೂಜಾ ವಿಧಿ ವಿಧಾನಗಳ ಮೂಲಕ ಅಂಬು ಒಡೆದು ಸಂಭ್ರಮವನ್ನು ಶನಿವಾರ ಆಚರಿಸಿದರು.
ಗ್ರಾಮಸ್ಥರು ಗ್ರಾಮದೇವರನ್ನು ಹೊತ್ತು ಊರಿನ ಸುತ್ತ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಸಾಂಪ್ರದಾಯಿಕ ಅಲಂಕೃತ ಉಡುಗೆಯೊಂದಿಗೆ ಸಿಂಗಾರಗೊಂಡಿದ್ದ ಪಟೇಲ ವಂಶಸ್ಥ ಎ.ಎನ್. ಮಹೇಶ್ ಹಾಗೂ ಕುಟುಂಬಸ್ಥರನ್ನು ಊರಿನ ಮುಖಂಡರು, ಗ್ರಾಮಸ್ಥರುಗಳು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಗ್ರಾಮದ ಅಂಬು ಒಡೆಯುವ ದೊಡ್ಡಕೆರೆ ಬಳಿಗೆ ಕರೆ ತರಲಾಯಿತು.
ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿ ಬನ್ನಿ ಮರದ ಬಳಿ ಶಮಿ ಪೂಜೆ ನೆರವೇರಿಸಿದ ನಂತರ ಊರಿನ ದೊಡ್ಡ ಕೆರೆ ಬಳಿಕ ಏರ್ಪಡಿಸಿದ ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬಾಳೆಗೊನೆಗೆ ಬಿಲ್ಲು ಹೊಡೆದು, ಬಂದೂರಿನಿಂದ ಬಾಳೆ ದಿಂಡನ್ನು ತುಂಡರಿಸಿದ ಬಳಿಕ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಾಚರಿಸಿದರು.
ಶ್ರೀ ಆಂಜನೇಯ ಸ್ವಾಮಿ, ಮಲ್ಲೇಶ್ವರಸ್ವಾಮಿ, ಗ್ರಾಮದೇವತೆಗಳಾದ ಮಾರಮ್ಮದೇವಿ ಹಾಗೂ ಭೂತಪ್ಪ ದೇವರ ಉತ್ಸವದೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಿಕವಾಗಿ ಬಾಳೆ ಗೊನೆಗೆ ಬಿಲ್ಲು ಹೊಡೆಯುವ ಮೂಲ ಅಂಬಿನ ಉತ್ಸವವನ್ನು ಯಶಸ್ವಿಗೊಳಿಸಿದರು.
ಈ ವೇಳೆ ಮಾತನಾಡಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಆರದವಳ್ಳಿ ಗ್ರಾಮಸ್ಥರು ಮನೆಮಗಳಂತೆ ಕೈಗೆ ಕಂಕಣಗಟ್ಟಿ ತಮ್ಮನ್ನು ಹಬ್ಬಕ್ಕೆ ಬರಮಾಡಿಕೊಂಡಿರುವುದು ಸಂತಸ ಮೂಡಿಸಿದೆ. ತಮ್ಮ ವ್ಯಾಪ್ತಿಯ ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದು ಅದರಂತೆ ಆರದವಳ್ಳಿ ಗ್ರಾಮ ದಲ್ಲಿ ಹಳ್ಳಿ ಸೊಗಡಿನಿಂದ ಆಚರಿಸುತ್ತಿರುವುದು ಖುಷಿ ತಂದಿದೆ ಎಂದರು.
ಅಂಬು ಉತ್ಸವವು ಅನೇಕ ವರ್ಷಗಳಿಂದ ಆರದವಳ್ಳಿಯ ಗ್ರಾಮದಲ್ಲಿ ಪಟೇಲ ವಂಶಸ್ಥರಿಂದ ಚಾಲನೆ ದೊರೆಯುತ್ತಿದೆ. ವಿಜಯದಶಮಿಯಂದು ಅಂಬುಹೊಡೆಯುವ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಹ್ವಾನ ನೀಡುವ ಮೂಲಕ, ಸಂಪ್ರದಾಯಿಕ ಉಡುಗೆ, ವಾದ್ಯಗೋಷ್ಠಿಯೊಂದಿಗೆ ಕರೆತಂದು ವಿಶೇಷ ಗೌರವದಿಂದ ಕಾಣುತ್ತಾರೆ.
ಮೈಸೂರು ಅರಸ್ ಆಳ್ವಿಕೆಯ ಸಂದರ್ಭದಲ್ಲಿ ಸಂಸ್ಥಾನದ ಆಡಳಿತವು ಅಲ್ಲಲ್ಲಿ ಪಟೇಲರ ನೇತೃತ್ವದಲ್ಲಿ ನಡೆಯುತ್ತಿತ್ತು. ಪಟೇಲರ ವ್ಯಾಪ್ತಿ 20 ರಿಂದ 30 ಹಳ್ಳಿಗಳಿದ್ದವು. ಮೈಸೂರಿನಲ್ಲಿ ಆರಂಭವಾದ ಸಾಂಪ್ರ ದಾಯಿಕ ದಸರಾ ಕಾರ್ಯಕ್ರಮ ನಾಡಿನಾದ್ಯಂತ ನಡೆಯಬೇಕೆಂಬುದು ಅರಸರ ಅಭಿಲಾಷೆಯಾಗಿತ್ತು. ಅಂತೆಯೇ ನಾಡಿನ ಎಲ್ಲಾ ಭಾಗದಲ್ಲಿಯೂ ಅಲ್ಲಿಯ ಸಂಸ್ಥಾನದ ಪಟೇಲರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಮಾನಿಸಲಾ ಯಿತು. ಅದರಂತೆ ಆರದವಳ್ಳಿ ಸೇರಿದಂತೆ ಎಲ್ಲಾ ಸಂಸ್ಥಾದಲ್ಲಿಯೂ ಆರಂಭಿಸಲಾಯಿತು.
ಸುಮಾರು 100 ವರ್ಷಗಳ ಹಿಂದೆ ಆರದವಳ್ಳಿಯಲ್ಲಿ ಅಲ್ಲಿಯ ಪಟೇಲರಾದ ದೊಡ್ಡಪುಟ್ಟೇಗೌಡರು ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರ ನೇತೃತ್ವದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಅವರ ಕಾಲಾನಂತರದಲ್ಲಿ ಕಾರ್ಯಕ್ರಮ ಸ್ಥಗಿತಗೊಂಡಿತು. ಬಳಿಕ ಚಾಲನೆಗೆ ಬಂದಿದ್ದು ಕಳೆದ 27 ವರ್ಷಗಳ ಹಿಂದೆ ಗ್ರಾಮಸ್ಥರು ಊರಿನ, ಹಿರಿಯರು ಸೇರಿದಂತೆ ಪಟೇಟರ ವಂಶಸ್ಥರಾದ ತಮ್ಮನ್ನು ಕೋರಿಕೊಂಡ ಹಿನ್ನೆಲೆಯಲ್ಲಿ ನಿರಂತ ರವಾಗಿ ವಿಜ್ರಂಭಣೆಯಿಂದ ಗ್ರಾಮದಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ.
ನವರಾತ್ರಿಯ ಪ್ರಾರಂಭದ ದಿನ ಗ್ರಾಮದೇವರುಗಳನ್ನು ಪಟ್ಟಕ್ಕೆ ಕೂರಿಸಿ ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದ್ದು 9 ದಿನಗಳ ಕಾಲ ದೇವರ ಪೂಜಾ ಕೈಂಕಾರ್ಯಗಳು ನಡೆಯುತ್ತದೆ. ಕೊನೆಯ ದಿನವಾದ ವಿಜಯದಶಮಿ ವಿಜ್ರಂಭಣೆಯಿಂದ ನೆರವೇರಲಿರುತ್ತದೆ.
ಈ ಸಂದರ್ಭದಲ್ಲಿ ಹರಿಹರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸ್ವಪ್ನ ಚಂದ್ರಶೇಖರ್, ಉಪಾಧ್ಯಕ್ಷ ಯಶ್ವಂತ್ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ, ಅರೇನಳ್ಳಿ ಪ್ರಕಾಶ್, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ್ಕುಮಾರ್, ಆರದವಳ್ಳಿ ಗ್ರಾಮಸ್ಥರಾದ ಪಾಪಣ್ಣ, ಎ.ಪಿ.ಜಯಣ್ಣ, ವೀರತ್ತೇಗೌಡ, ನಾಗರಾಜ್, ಕಲ್ಲೇಗೌಡ, ತಾಂಡವಮೂರ್ತಾ ಚಾರ್, ಎ.ಎಂ.ಅಣ್ಣೇಗೌಡ, ಎ.ಎಂ.ಚಂದ್ರೇಗೌಡ, ಹಾಲೇಶ್, ಎ.ಎಂ.ಪುಟ್ಟೇಗೌಡ, ಸಣ್ಣೇಗೌಡ ಹಾಜರಿದ್ದರು.


