ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಜತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಪತಿಯನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನದಲ್ಲಿ ವಿಫಲವಾಗಿ ಮೂಡಿಗೆರೆ ಮೂಲದ ಕಾಫಿ ಪ್ಲಾಂಟರ್ ಮಗನೊಬ್ಬ ಸಕಲೇಶಪುರ ಪೋಲಿಸರ ವಶವಾಗಿದ್ದಾನೆ.
ಪ್ರಕರಣದಲ್ಲಿ ನಾಲ್ವರು ಬಂಧಿಯಾಗಿದ್ದಾರೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲದ ಕಾಫಿ ಬೆಳೆಗಾರ ಮಹಮ್ಮದ್, ಆಟೋ ಚಾಲಕ ಹೈದರ ಆಲಿ, ಸಜಾದ್, ಮುಬಾರಕ್ ಬಂಧಿತರು. ಬಕಾರ್ ಅಲಿ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಒಂದು ಕೆ.ಜಿ. ನೂರಮೂವತ್ತು ಗ್ರಾಂ ಗಾಂಜಾ, ಒಂದು ಥಾರ್ ಜೀಪು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ಹಿನ್ನೆಲೆ:
ಅಸ್ಸಾಂ ಮೂಲದ ಬಕಾರ್ ಆಲಿ ಹಾಗೂ ಸೋಹಿತ್ ಉನ್ನೀಸ ವಿವಾಹವಾಗಿದ್ದು ಮೂಡಿಗೆರೆ ತೋಟ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇದೇ ತೋಟದಲ್ಲಿ ಕಾರ್ಮಿಕನಾಗಿದ್ದ ಮುಕ್ತಾರ್ ಆಲಿ ಹಾಗೂ ಸೋಹಿತ್ ಉನ್ನಿಸ್ ನಡುವೆ ಅಕ್ರಮ ಸಂಬಂಧ ಏರ್ಪಟಿತ್ತು. ವಿಚಾರ ಬೆಳಕಿಗೆ ಬಂದ ನಂತರ ಪತಿ ಬಕಾರ್ ಆಲಿ ಸಿಟ್ಟಿಗೆದ್ದಿದ್ದ. ರಾಜಿ ಪಂಚಾಯತಿ ನಡೆದು ಸೋಹಿತ್ ಉನ್ನಿಸ್ ಮೊದಲ ಗಂಡ ಬಕಾರ್ ಆಲಿಯನ್ನು ಬಿಟ್ಟು ಮುಕ್ತಾರ ಅಲಿಯನ್ನು ಮದುವೆಯಾಗಿದ್ದಳು.
ಮದುವೆ ನಂತರ ಪತ್ನಿಯನ್ನು ಮೂಡಿಗೆರೆ ತೋಟದ ಮನೆಯಲ್ಲೆ ಬಿಟ್ಟು ಮುಕ್ತರ್ ಆಲಿ ಸಕಲೇಶಪುರ ತಾಲೂಕಿನ ಕಾಫಿ ತೋಟ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮೂಡಿಗೆರೆಗೆ ಬಂದು ಹೋಗುತ್ತಿದ್ದ.
ಈ ಮಧ್ಯೆ ಸೋಹಿತ್ ಉನ್ನಿಸಳ ಜೊತೆ ಆಕೆ ಕೆಲಸ ಮಾಡುತ್ತಿದ್ದ ಕಾಫಿ ತೋಟದ ಮಾಲೀಕನ ಮಗ ಉಸಾಮ ಮಹಮ್ಮದ್ ಅಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಈ ವಿಷಯ ತಿಳಿದು ಸಿಟ್ಟಿಗೆದ್ದು ಮುಕ್ತಾರ ಆಲಿ ಪತ್ನಿಗೆ ಹಿಂಸೆ ನೀಡುತ್ತಿದ್ದ. ಮತ್ತು ಆಕೆಯನ್ನು ಆ ತೋಟದಿಂದ ಬಿಟ್ಟು ತನ್ನೊಂದಿಗೆ ಸಕಲೇಶಪುರದ ತೋಟಕ್ಕೆ ಬಾ ಎಂದು ಒತ್ತಾಯಿಸತೊಡಗಿದ್ದು. ಈ ವಿಚಾರವನ್ನು ಮಹಿಳೆ ಮಹಮ್ಮದ್ಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡಿದ್ದ ಮಹಮ್ಮದ್ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಮುಕ್ತಾರ್ ಆಲಿಯನ್ನು ಪೋಲಿಸ್ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲು ಯೋಜನೆ ರೂಪಿಸಿದ್ದ.

ಇದಕ್ಕಾಗಿ ತನ್ನ ಸ್ನೇಹಿತರಾದ ಆಟೋ ಚಾಲಕ ಸಜ್ಜಾದ್, ಮುಬಾರಕ್, ಹೈದರ್ ಅಲಿ ಹಾಗೂ ಸೋಹಿತ್ ಉನ್ನಿಸ್ ಮೊದಲ ಪತಿ ಬಕಾರ್ ಆಲಿ ಸಹಕಾರ ಪಡೆದು ಗಾಂಜಾ ಪ್ರಕರಣದಲ್ಲಿ ಮುಕ್ತಾರ್ ಆಲಿಯನ್ನು ಸಿಲುಕಿಸಲು ಯೋಜನೆ ರೂಪಿಸಿದ್ದ.
ಯೋಜನೆಯಂತೆ ಗಾಂಜಾ ಖರೀದಿಸಿ ಸಕಲೇಶಪುರಕ್ಕೆ ಬಂದು ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪದ ಹೋಟೆಲ್ನಲ್ಲಿ ಕುಳಿತಿದ್ದ ಮುಕ್ತಾರ್ ಆಲಿಯನ್ನು ಬಲವಂತವಾಗಿ ಜೀಪಿನಲ್ಲಿ ಕುಳ್ಳಿರಿಸಿ ಮೂಡಿಗೆರೆ ಕಡೆಗೆ ಕರೆತರುತ್ತಿದ್ದ. ಮೂಡಿಗೆರೆಯಲ್ಲಿ ಗಾಂಜಾವನ್ನು ಆಟೋದಲ್ಲಿಟ್ಟು, ಅದರಲ್ಲಿ ಮುಕ್ತಾರ್ ಆಲಿಯನ್ನು ಕೂರಿಸಿ ಪೊಲೀಸ್ ಠಾಣೆಗೆ ಒಪ್ಪಿಸಲು ಪ್ಲಾನ್ ರೂಪಿಸಿದ್ದ.
ಈ ವಿಚಾರ ಸಾರ್ವಜನಿಕರಿಂದ ಸಕಲೇಶಪುರ ಪಟ್ಟಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಅವರ ಗಮನಕ್ಕೆ ಬಂದಿದ್ದು, ತಕ್ಷಣವೇ ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಮೂಡಿಗೆರೆಗೆ ತೆರಳುತ್ತಿದ್ದ ಆಟೋ ಹಾಗೂ ಥಾರ್ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬಕಾರ್ ಆಲಿ ತಪ್ಪಿಸಿಕೊಂಡಿದ್ದಾನೆ. ಪೋಲಿಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬಂದಿತ ಆರೋಪಿ ಪ್ರಕರಣದ ಮಾಸ್ಟರ್ ಮೈಂಡ್ ಮಹಮ್ಮದ್ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ಎಸ್ಟೇಟ್ ಮಾಲೀಕರ ಮಗ, ಮೂವರು ಆರೋಪಿಗಳು ಮೂಡಿಗೆರೆ ಪಟ್ಟಣದಲ್ಲಿ ಆಟೋ ಚಾಲಕರಾಗಿದ್ದಾರೆ. ಇವರಿಗೆ ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಎಲ್ಲಿಂದ ಬಂತು ಎಂಬುದನ್ನು ತನಿಖೆ ನಡೆಸಿದರೆ ಇನ್ನಷ್ಟು ಜನರು ಸಿಕ್ಕಿಬೀಳುವ ಸಾಧ್ಯತೆಯಿದೆ.



