ಈ ಹಿಂದೆ ಕುನ್ನಳ್ಳಿ ಸಮೀಪದ ಕೆಲ್ಲೂರು ಗ್ರಾಮದ ಸರ್ವೆ ನಂ 82ರಲ್ಲಿ 4.38 ಎಕರೆ ಭೂಮಿ ನಿವೇಶನಕ್ಕೆ ಮೀಸಲಿಟ್ಟ ಜಾಗವನ್ನು ಬೇರೆ ವ್ಯಕ್ತಿಯೋರ್ವರಿಗೆ 53 ಯಲ್ಲಿ ಖಾತೆ ಮಾಡಿಕೊಡಲಾಗಿದೆ. ಅದನ್ನು ವಜಾಗೊಳಿಸಿ ನಿವೇಶನಕ್ಕೆ ಮೀಸಲಿರಿಸಬೇಕೆಂದು ಭೂ ಸಂಘರ್ಷ ಸಮಿತಿ ಉಪಾಧ್ಯಕ್ಷ ರಮೇಶ್ ಕೆಳಗೂರು ಒತ್ತಾಯಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಭೂ ಮಂಜೂರಾತಿ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಇಂತಹ ಹೊತ್ತಲ್ಲಿ ತಾಲೂಕಿನಲ್ಲಿ ಅನೇಕ ಕಡೆ ಮತ್ತೆ ಅಕ್ರಮ ಭೂ ಮಂಜೂರಾತಿ ಕಾರ್ಯ ನಡೆಯುತ್ತಿದೆ. ಅದರಲ್ಲಿ ನಿವೇಶನಕ್ಕಾಗಿ ಕೆಲ್ಲೂರು ಗ್ರಾಮದಲ್ಲಿ ಮೀಸಲಿಟ್ಟ ಜಾಗ ಕೂಡ ಒಂದಾಗಿದೆ. ಪಹಣಿಯಲ್ಲಿ ಅಡಕೆ, ಕಾಫಿ, ಮೆಣಸು ನಮೂದಾಗಿದ್ದು, ಅಲ್ಲಿ ಇಂತಹ ಯಾವ ಬೆಳೆ ಕೂಡ ಬೆಳೆಸಿಲ್ಲ. ಈ ಬಗ್ಗೆ ಈಗಿನ ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಎಸಿ ಅವರಿಗೆ ದೂರು ಕೂಡ ನೀಡಲಾಗಿದೆ. ಈ ಜಾಗವನ್ನು ನಿವೇಶನಕ್ಕೆ ಮೀಸಲಿರಿಸದಿದ್ದರೆ ತಾಲೂಕು ಕಚೇರಿ ಎದುರು ದರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯ ಚಂದ್ರೇಶ್ ಮಾತನಾಡಿ, ಕೆಲ್ಲೂರು ಗ್ರಾಮದಲ್ಲಿರುವ 4.38 ಎಕರೆ ಸರಕಾರಿ ಭೂಮಿಯನ್ನು ಈ ಹಿಂದೆ ಗುರುತು ಮಾಡಿ, ಅಲ್ಲಿರುವ ಸುಮಾರು 100ಕ್ಕು ಅಧಿಕ ಕುಟುಂಬಕ್ಕೆ ನಿವೇಶನ ನೀಡಲು ಗ್ರಾ.ಪಂ.ಯಲ್ಲಿ ಎಲ್ಲಾ ಸದಸ್ಯರು ಸಭೆನಡೆಸಿ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೇ ಶಾಸಕರು, ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ನಿವೇಶನ ಮಂಜೂರಾತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆ ಭೂಮಿಯನ್ನು ಫಾ.ನಂ 53ಯಲ್ಲಿ ಓರ್ವ ವ್ಯಕ್ತಿಗೆ ಮಂಜೂರು ಮಾಡಿಕೊಡಲಾಗಿದೆ. ಇದು ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಇದೂ ಕೂಡ ಒಂದಾಗಿದೆ. ಹಾಗಾಗಿ ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ, ನಿವೇಶನಕ್ಕೆ ಮೀಸಲಿರಿಸಬೇಕೆಂದು ಒತ್ತಾಯಿಸಿದರು.
ನಿವೇಶನ ರಹಿತ ಹೋರಾಟ ಸಮಿತಿ ಅಧ್ಯಕ್ಷ ಹರೀಶ್ ಕೆಲ್ಲೂರು, ಕಾರ್ಯದರ್ಶಿ ಜನಾರ್ಧನ್, ಕೆ.ಟಿ.ಪೂವಪ್ಪ, ರಮೇಶ್, ಹರೀಶ್ ನಲಿಕೆ, ರಾಜೇಂದ್ರ, ರಘು, ಅಭಿ, ಸಂತೋಷ್, ಸತೀಶ್ ಮತ್ತಿತರರಿದ್ದರು.



