ಚಾರ್ಮಾಡಿ ಘಾಟ್ ರಸ್ತೆಯನ್ನು ದ್ವಿಪಥ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಕಾಮಗಾರಿಗೆ 343 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎಸ್ಎಲ್ವಿ ಕನ್ಸ್ಟ್ರಕ್ಷನ್ ಕಂಪೆನಿಗೆ ಕಾಮಗಾರಿ ಸ್ವೀಕಾರ ಪತ್ರ ನೀಡಲಾಗಿದೆ. ಇನ್ನು ಘಾಟ್ ರಸ್ತೆಯಲ್ಲಿರುವ ಮರಗಳ ತೆರವು ಪ್ರಕ್ರಿಯೆ. ಕೆಲವೆಡೆ ಭೂಸ್ವಾಧೀನ, ಪರಿಹಾರ ವಿತರಣೆ. ವಿದ್ಯುತ್- ನೀರಿನ ಲೈನ್ ಸ್ಥಳಾಂತರ ಇನ್ನಿತರ ಪೂರ್ವಭಾವಿ ಕೆಲಸಗಳನ್ನು ಮುಗಿಸಿ ಕಾಮಗಾರಿ ಆರಂಭವಾಗಲು ಇನ್ನೆರಡು ತಿಂಗಳಾದರೂ ಬೇಕು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು.

11 ಕಿಮೀ ಮಾತ್ರ ಕಾಮಗಾರಿ:
ಚಾರ್ಮಾಡಿ ಘಾಟಿ ಮಾರ್ಗದ 25 ಕಿ.ಮೀ. ಪೈಕಿ 11 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಹಾಗೂ ಉಳಿದ ರಸ್ತೆ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದಾಗಿದೆ. ಈಗ ಕಾಮಗಾರಿ ನಡೆಯುವುದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯವರೆಗೆ ಮಾತ್ರ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ರಸ್ತೆ ಕಾಮಗಾರಿ ಯೋಜನೆ ಡಿಪಿಆರ್ ಹಂತದಲ್ಲಿದೆ.
ಪ್ರಸ್ತುತ ದ.ಕ. ಜಿಲ್ಲಾ ವ್ಯಾಪ್ತಿಯ 11 ಕಿ.ಮೀ. ಘಾಟಿ ರಸ್ತೆ ಕಾಮಗಾರಿಗೆ ಕೇಂದ್ರದಿಂದ 343 ಕೋಟಿ ರು. ಬಿಡುಗಡೆಯಾಗಿದ್ದರೂ, ಟೆಂಡರ್ ಆಗಿರೋದು 175 ಕೋಟಿ ರು.ಗೆ ಮಾತ್ರ. ಘಾಟಿ ಮಾರ್ಗದ ಆರಂಭದಲ್ಲಿ 900 ಮೀ. ವ್ಯಾಪ್ತಿಯಲ್ಲಿ ಖಾಸಗಿ ಭೂಮಿ ಇದ್ದು, ಅದಕ್ಕೆ ಪರಿಹಾರ ನೀಡುವುದು ಸೇರಿದಂತೆ ಕಾಮಗಾರಿಯ ಇತರ ಪೂರ್ವಭಾವಿ ಕೆಲಸಗಳಿಗೆ ಉಳಿದ ಹಣವನ್ನು ಬಳಕೆ ಮಾಡಲಾಗುತ್ತದೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಭೂಕುಸಿತದಿಂದ ವಾಹನ ಸಂಚಾರ ಸ್ಥಗಿತವಾಗುವುದು ಸರ್ವೇ ಸಾಮಾನ್ಯ. ಇದನ್ನು ತಡೆಗಟ್ಟಲು ಪೂರಕ ಕಾಮಗಾರಿಗಳನ್ನು ನಡೆಸಲಾಗುತ್ತದೆ. ರಸ್ತೆಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮೋರಿ, ಚರಂಡಿ ನಿರ್ಮಾಣ, ಅಗತ್ಯ ಇರುವ ಕಡೆಗಳಲ್ಲಿ ಸೇತುವೆ ನಿರ್ಮಾಣ. ಗುಡ್ಡದ ಮಣ್ಣು- ಬಂಡೆಕಲ್ಲುಗಳು ಜರಿದು ಬೀಳದಂತೆ ರಿಟೈನಿಂಗ್ ವಾಲ್ ಇತ್ಯಾದಿ ಮುನ್ನೆಚ್ಚರಿಕೆ ಕಾಮಗಾರಿ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.



