ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಕಂದಾಯ ಗ್ರಾಮಗಳನ್ನು ಘೋಷಿಸಬೇಕೆಂದು ಒತ್ತಾಯಿಸಿ ರೈತರ ಅರಣ್ಯಭೂಮಿ ಸಮಸ್ಯೆಗಳ ಬಗ್ಗೆ ಡಿ.9 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಎರಡೂ ಸದನದಲ್ಲಿ ಚರ್ಚಿಸಿ ನಿರ್ದಿಷ್ಟ ಪರಿಹಾರದ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಡಿ.5 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್. ವಿಜಯಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಈ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರೈತರು ಭಾಗವಹಿಸಲಿದ್ದಾರೆ, ವಿವಿಧ ರಾಜಕೀಯ ಪಕ್ಷಗಳು ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಸದನದಲ್ಲಿ ಚರ್ಚಿಸುವಂತೆ ಆಗ್ರಹಿಸಲಾಗುವುದು, ಈ ಧರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಚಿಕ್ಕಮಗಳೂರು ಜಿಲ್ಲೆ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿನ ಕಂದಾಯ ಮತ್ತು ಅರಣ್ಯ ಭೂಮಿಗಳ ಸಮಸ್ಯೆಗಳಾದ ಸೊಪ್ಪಿನ ಬೆಟ್ಟ, ಇನಾಂಭೂಮಿ, ಸೆಕ್ಷನ್4(1) ಮೀಸಲು ಅರಣ್ಯ ಪ್ರಸ್ತಾವನೆ, ಮುಳ್ಳಯ್ಯನಗಿರಿ ಸಂಘರ್ಷಿತ ಸೂಕ್ಷ್ಮ ಪ್ರದೇಶ ಪ್ರಸ್ತಾವನೆ, ಅರಣ್ಯ ಭೂಮಿಯಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಆಗ್ರಹಿಸಿದರು.
ಸಮಿತಿ ವತಿಯಿಂದ ಬೆಂಗಳೂರಿಗೆ ನಿಯೋಗ ತೆರಳಿ ದಿನಾಂಕ:19-9-24 ರಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡರಿಗೆ ಜಿಲ್ಲೆಯ ರೈತರ ಭೂಮಿಗಳ ಪೋಡಿ ಸಮಸ್ಯೆ ಬಗ್ಗೆ ಸವಿಸ್ತಾರವಾಗಿ ಮನವಿ ಸಲ್ಲಿಸಲಾಗಿದ್ದು, ಅದರಂತೆ ಸಚಿವರು ನಾವು ನೀಡಿದ ಮನವಿಯಲ್ಲಿನ ಸಮಸ್ಯೆಗಳನ್ನು ಗುರುತಿಸಿ ಹಂತ ಹಂತವಾಗಿ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಸರ್ವೆ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ಹಲವಾರು ಸಲಹೆ ಸೂಚನೆಗಳನ್ನು ಆದೇಶಿಸಿದ್ದು ಇವರ ಕಾರ್ಯವೈಖರಿಯನ್ನು ಸಮಿತಿ ಅಭಿನಂದಿಸುತ್ತದೆ. ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿನ ಅಧಿಕಾರಿಗಳು ರೈತರ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ತುರ್ತಾಗಿ ಮಾಡಿಕೊಡುವಂತೆ ಕ್ರಮವಹಿಸಬೇಕೆಂದು ಸಚಿವರಲ್ಲಿ ಆಗ್ರಹಿಸಿದರು.
ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಪ್ರಸ್ತಾವನೆಯನ್ನು 35(ಎ) 1972ರ ಅರಣ್ಯ ಕಾಯ್ದೆಯಂತೆ ಸುಮಾರು 13,000 ಎಕರೆ ಪ್ರದೇಶಗಳಾದ ಕಂದಾಯ, ಗೋಮಾಳ, ಹುಲುಬನ್ನಿ, ಕಾಫಿ ಖರಾಬು ರೀತಿಯ ಎಲ್ಲಾ ಸರ್ಕಾರಿ ಭೂಮಿಗಳನ್ನು ಮೀಸಲು ಪ್ರದೇಶ ಮಾಡಲು ರಾಜ್ಯ ಸರ್ಕಾರಕ್ಕೆ ರಾಜ್ಯದ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದರು.
ಜಿಲ್ಲಾಡಳಿತವು 36(ಎ) 1972ರ ಸಾರಾಂಶವನ್ನು ಕಡೆಗಣಿಸಿ ಮೀಸಲು ಪ್ರದೇಶ ಮಾಡಲು ಹೊರಟಿದ್ದ ಸಮಯದಲ್ಲಿ ಸಮಿತಿಯ ಹೋರಾಟದಿಂದ ಜನಾಭಿಪ್ರಾಯವನ್ನು ಸಂಗ್ರಹಿಸಿದ ನಂತರ ಯೋಜನೆಯ ವ್ಯಾಪ್ತಿಯನ್ನು ಪುನರ್ ಪರಿಶೀಲಿಸಲು ಸಂಬಂಧಿಸಿದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗಿತ್ತು ಎಂದರು.
ಈ ಹಿನ್ನೆಲೆಯಲ್ಲಿ ಚೆಲ್ಲಾಡಳಿತದಲ್ಲೇ ಇದ್ದ ಪ್ರಸ್ತಾವನೆಯನ್ನು ಇತ್ತೀಚಿನ ದಿನಗಳಲ್ಲಿ ಸುಮಾರು 23,500 ಎಕರೆ ಹೆಚ್ಚು ಪ್ರದೇಶವನ್ನು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದ್ದು, ಇದನ್ನು ಜನರಿಂದ ಮತ್ತು ಜನಪ್ರತಿನಿಧಿಗಳಿಂದ ಮುಚ್ಚಿಟ್ಟು ಯೋಜನೆ ಜಾರಿಗೊಳಿಸುವುದನ್ನು ಸಮಿತಿ ವಿರೋಧಿಸುತ್ತದೆ. ಹಾಗೂ ಹೀಗಿರುವ ಅರಣ್ಯ ಕಾನೂನುಗಳನ್ನು ಸಮರ್ಪಕವಾಗಿ ಬಳಸಿ ಗ್ರಾಮಸ್ಥರ ಸಹಯೋಗ ಮತ್ತು ಸಹಕಾರದೊಂದಿಗೆ ಅರಣ್ಯ ಮತ್ತು ಪಶ್ಚಿಮ ರಕ್ಷಣೆ ಮಾಡಬೇಕೆಂದು ಸಮಿತಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕೆ.ಕೆ ರಘು, ಮುನ್ನಾ ಇದ್ದರು.



