ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿನ ಇಚ್ಛಾಸಕ್ತಿ ಮತ್ತು ಹೊಂದಾಣಿಕೆ ಕೊರತೆ ಎಂದಿಗೂ ಆಗಬಾರದು. ಅದರಿಂದ ಅಭಿವೃದ್ಧಿಗೆ ತೊಡಕುಂಟಾಗುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಜಿ.ಪಂ. ಮತ್ತು ತಾ.ಪಂ. ವತಿಯಿಂದ ಏರ್ಪಡಿಸಿದ್ದ ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರಿಗಳ ಗುರಿ ಹಾಗೂ ಉದ್ದೇಶ ಒಂದೇ ಇರಬೇಕು. ಆಗ ಮಾತ್ರ ಜನರ ಸಮಸ್ಯೆ ಬಗೆಹರಿಸಲು ಹಾಗೂ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆ. ಗ್ರಾ.ಪಂ. ಮಟ್ಟದಲ್ಲಿಯೇ ಪರಿಹರಿಸಬಹುದಾದ ಅನೇಕ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳಬೇಕು. ಅದು ತನ್ನ ಬಳಿ ಬಾರದಂತೆ ತಪ್ಪಿಸಬೇಕು. ಗ್ರಾ.ಪಂ. ಯಿಂದ ಸಂಸತ್ ಸದಸ್ಯರವರೆಗೆ ಇರುವ ಎಲ್ಲಾ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಜನರ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂದು ಹೇಳಿದರು.

ತನ್ನ ಕ್ಷೇತ್ರ ಮಲೆನಾಡು ಪ್ರದೇಶವಾಗಿದ್ದರಿಂದ ಪ್ರತಿ ಗ್ರಾಮಗಳ ಅಂತರ ಹೆಚ್ಚಿದ್ದರಿಂದ ವ್ಯಾಪ್ತಿ ದೊಡ್ಡದಾಗಿದ್ದು, ಕ್ಷೇತ್ರ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಇದ್ದರೂ ಕೂಡ ಅಭಿವೃದ್ಧಿಯಲ್ಲಿ ತುಂಬಾ ಹಿಂದುಳಿದಿದೆ. ಸರಕಾರದಿಂದ ಬರುವ ಅನುದಾನ ಬಳಸಿ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಾನು ಶಾಸಕರಾದ ಬಳಿಕ ಬರುವ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಿ, ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ನಡೆಸುತ್ತಿದ್ದೇನೆ. ಇದೇ ರೀತಿ ಗ್ರಾ.ಪಂ.ಗಳಲ್ಲಿಯೂ ನಡೆಸಬೇಕೆಂದು ಸಲಹೆ ನೀಡಿದರು.
ಜಿ.ಪಂ. ಸಿಇಒ ಕೀರ್ತನಾ ಮಾತನಾಡಿ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಮನ್ವಯತೆ ಕೊರೆತೆ ಇರಬಾರದೆಂಬ ದೃಷ್ಟಿಯಿಂದ ಈ ಕಾರ್ಯಗಾರ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಜನರ ಹಿತ ದೃಷ್ಟಿಯಿಂದ ಸರಕಾರದ ಯೋಜನೆ ಹಾಗೂ ಆದೇಶಗಳು ಬದಲಾಗುತ್ತಿರುತ್ತದೆ ಹಾಗಾಗಿ ಕಾರ್ಯಗಾರ ಪ್ರತಿ 4 ತಿಂಗಳಿಗೊಮ್ಮೆ ನಡೆಯುವಂತಾಗಬೇಕೆಂದು ಹೇಳಿದರು.
ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣ ನಾಯಕ್, ಯೋಜನಾ ನಿರ್ದೇಶಕಿ ನಯನಾ, ತಾ.ಪಂ. ಇಒ ದಯಾವತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.




