ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮೂಡಿಗೆರೆ ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರ ದೀಪಕ್ ದೊಡ್ಡಯ್ಯ, ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿಂದ ಬರುತ್ತಿರುವ ವರದಿಗಳನ್ನು ಕೇಳಿದರೆ ತುಂಬಾ ನೋವಾಗುತ್ತದೆ. ಅಲ್ಲಿ ಇತ್ತೀಚೆಗೆ ಹೊಸ ಆಡಳಿತ ವ್ಯವಸ್ಥೆ ಬಂದ ಮೇಲೆ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರಿದೆ. ಸಿಕ್ಕ ಸಿಕ್ಕಲ್ಲಿ ಹಿಂದೂಗಳ ಮೇಲೆ, ಹಿಂದೂ ಪೂಜಾ ಸ್ಥಳಗಳ ಮೇಲೆ ದಾಳಿಗಳು ಆಗುತ್ತಿವೆ. ಅಲ್ಲಿನ ಜನರಿಗೆ ಸ್ವಾತಂತ್ರ್ಯಕೊಡಿಸಿದ್ದೇ ಭಾರತ, ಬಾಂಗ್ಲಾದೇಶದ ಅಭಿವೃದ್ಧಿಯಲ್ಲಿ ಭಾರತದ ಮತ್ತು ಹಿಂದೂಗಳ ಪಾತ್ರ ಮಹತ್ವದ್ದಾಗಿದೆ. ಅಲ್ಲಿನ ಆರ್ಥಿಕತೆ ಬಹುತೇಕ ಭಾರತದ ಮೇಲೆ ಅವಲಂಭಿತವಾಗಿದೆ. ಅಂತಹ ದೇಶ ಈಗ ಭಾರತದ ಮೇಲೆ ತಿರುಗಿ ಬಿದ್ದಿದೆ. ವಿಶೇಷವಾಗಿ ಹಿಂದೂಗಳ ಮೇಲೆ ಸೇಡಿಗೆ ಮುಂದಾಗಿದೆ.
ಈ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು. ಭಾರತ ಸರ್ಕಾರವು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ಜರುಗಿಸುವ ಅನಿವಾರ್ಯತೆ ಎದುರಾಗಿದೆ. ಎಂತಹುದೇ ಕಠಿಣ ಪರಿಸ್ಥಿತಿ ಎದುರಾದರೂ ಸರಿ ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಮೂಡಿಗೆರೆ ಮಂಡಲ ಬಿಜೆಪಿ ಅಧ್ಯಕ್ಷ ಟಿ.ಎಂ. ಗಜೇಂದ್ರ, ಜೆ.ಎಸ್.ರಘು, ಸಂತೋಷ್ ಕೋಟ್ಯಾನ್, ಶಶಿ ಆಲ್ದೂರು, ಪ್ರವೀಣ್ ನಿಡಗೂಡು, ಪರೀಕ್ಷಿತ್ ಜಾವಳಿ, ಸುನಿಲ್ ಮಣ್ಣಿಕೆರೆ, ಮೂಡಿಗೆರೆ ಯುವಮೋರ್ಚಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.



