ಹಲವು ದೇವರುಗಳನ್ನು ಪೂಜಿಸುವವರು ಇದ್ದರೂ ಸಹ ದತ್ತಪೀಠದ ಮುಕ್ತಿಗೆ ಹಿಂದುಗಳು ತಮ್ಮ ವೈರುಧ್ಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರುವುದು ಶ್ಲಾಘನೀಯ ಎಂದು ವಾಗ್ಮಿ ಸೂಲಿಬೆಲೆ ಚಕ್ರವರ್ತಿ ಹೇಳಿದರು.
ಶುಕ್ರವಾರ ಚಿಕ್ಕಮಗಳೂರು ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ 25ನೇ ವರ್ಷದ ದತ್ತಜಯಂತಿ ಶೋಭಾಯಾತ್ರೆಯ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಶೋಭಾಯಾತ್ರೆಯಲ್ಲಿ ಸೇರಿದ್ದ ಹಿಂದೂ ಯುವಕ ಯುವತಿಯರು ಈ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಒಗ್ಗಟ್ಟನ್ನು ಜೀವಂತಾಗಿಟ್ಟುಕೊಳ್ಳಬೇಕು. ಹಿಂದೂ ಎಂದರೇ ನಾಚಿಕೆ ಪಡುವ ಸಂಸ್ಕೃತಿಯಿಂದ ಮೈಕೊಡವಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು ಎಂದರು.
ಅನೇಕ ಧರ್ಮಗಳು ಪ್ರಾಣಿಗಳನ್ನು ಕಡಿದು ರಕ್ತದ ಓಕುಳಿಯನ್ನು ಹರಿಸಿ ಹಬ್ಬ ಆಚರಿಸಿದರೇ ಹಿಂದೂ ಧರ್ಮದವರು ಹೋಳಿ ಎರಚಿ ಸಂಭ್ರಮಿಸಿ, ವಸುದೈವಕುಟುಬಕಂ ಎಂದು ಭೋದಿಸಿದ ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕು ಎಂದು ಹೇಳಿದರು.
ಜಗತ್ತಿನ ಹಲವು ನಾಗರಿಕತೆಗಳು, ಪರಂಪರೆಗಳು ಅಳಿದುಹೋದರು ಸಹ ಹಿಂದೂ ಸಂಸ್ಕೃತಿ ಇಂದಿಗೂ ಜೀವಂತವಿದೆ. ಹಿಂದೂ ಧರ್ಮದಲ್ಲಿ ಸತ್ತನಂತರ ಪಂಚಭೂತಗಳಲ್ಲಿ ಲೀನವಾಗಿ ಪುರ್ನಜನ್ಮವಾಗಿ ಹುಟ್ಟುವ ಪವಿತ್ರ ನಂಬಿಕೆಯಿರುವ ಧರ್ಮ ನಮ್ಮದು ಎಂದು ನಾವೆಲ್ಲರೂ ಹೆಮ್ಮೆ ಪಡೆಬೇಕಿದೆ ಎಂದರು.
ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಪೀಠಾಧಿಪತಿ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಮಾತನಾಡಿ, ಭಾತರ ದೇಶ ಪಾಶ್ಯಾತ್ಯ ಸಂಸ್ಕೃತಿಯ ಗ್ರಹಣಕ್ಕೆ ಒಳಗಾಗಿ ಮೂಲ ಸಂಸ್ಕೃತಿಯನ್ನು ಮರೆಯುವ ಪರಿಸ್ಥಿತಿ ಬಂದಿರುವುದು ವಿಷಾಧನೀಯ ಎಂದ ಅವರು, ಆಧುನಿಕ ಮಾಧ್ಯಮಗಳಿಂದ ಕೌಟುಂಬಿಕತೆ ಛಿದ್ರವಾಗಿ ಭಾರತೀಯತೆಯ ಗೌರವ ಹಾಳಾಗುತ್ತಿದೆ ಎಂದು ಹೇಳಿದರು.
ಪಕ್ಕದ ಶತೃರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳು ಶಸಸ್ತ್ರಗಳ ಮೂಲಕ ನಮ್ಮ ದೇಶವನ್ನು ಗೆಲ್ಲಲಾಗದೆ ಮಾಧಕ ವಸ್ತುಗಳ ಸಾಗಣೆ, ವಿದ್ರೋಹಿಗಳನ್ನು ದೇಶದೊಳಗೆ ನುಗ್ಗಿಸುವುದು ಜಿಹಾದ್ ತಂತ್ರಗಳ ಮೂಲಕ ಷಡ್ಯಂತರ ರೂಪಿಸುತ್ತಿದ್ದು, ಶತೃಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಸನಾತನ ಸಂಸ್ಕೃತಿಯಡಿ ಎಲ್ಲಾ ಹಿಂದೂ ಧರ್ಮಿಯರು ಒಂದಾಗಬೇಕಿದೆ ಎಂದು ತಿಳಿಸಿದರು.

ಹಿಂದೂ ಸಮಾಜದ ಜಾಗೃತಿಗಾಗಿ ದತ್ತಪೀಠದಂತಹ ಅಭಿಯಾನಗಳು ದೇಶದಲ್ಲಿ ಪ್ರಮುಖಪಾತ್ರವಹಿಸಿದ್ದು, ಮುಂದಿನ ದಿನಗಳಲ್ಲಿ ಮಧುರ, ಕಾಶಿ ಸೇರಿದಂತೆ ವಿವಿಧ ಧರ್ಮಕ್ಷೇತ್ರಗಳ ರಕ್ಷಣೆಗಾಗಿ ದೇಶಾದ್ಯಂತ ಅಭಿಯಾನಗಳು ನಡೆದು ಜನಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸನಾತನ ಧರ್ಮ ಎಂಬುದು ಹುಟ್ಟಿಲ್ಲದ ಸ್ವಯಂಭೋ ಧರ್ಮವಾಗಿದ್ದು, ಅದಕ್ಕೆ ಎಂದಿಗೂ ಸಾವಿಲ್ಲ. ತಾವೂ ಬದುಕಿ ಇತರರಿಗೆ ಬದುಕಲು ಬಿಡುವ ಉದಾತ್ತಾ ಸಂದೇಶಗಳನ್ನು ಹೊಂದಿರುವ ಅತ್ಯಂತ ಪವಿತ್ರವಾದ ಧರ್ಮ ಹಿಂದೂ ಧರ್ಮವಾಗಿದ್ದು, ಅದರ ರಕ್ಷಣೆಗೆ ಹಿಂದೂ ಧರ್ಮಿಯರು ತಮ್ಮ ಭಿನ್ನತೆ ಗಳನ್ನು ಬದಿಗಿಟ್ಟು ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಧರ್ಮಜಾಗೃತಿ ಮೊಳಕೆಯೊಡೆಯುತ್ತಿದ್ದು, ಅದು ಹೆಮ್ಮರವಾಗಿ ಬೆಳೆದು ಹಿಂದೂ ಧರ್ಮಿಯರನ್ನು ಒಗ್ಗಟ್ಟಾಗಿಸಬೇಕಿದೆ ಎಂದು ಹೇಳಿದ ಅವರು, ಭಾರತದ ರಾಜಕಾರಣಿಗಳು ಪಕ್ಷಭೇದ ಮರೆತು ಸಂಸ್ಕೃತಿ ರಕ್ಷಣೆಗೆ ಕಟಿಬದ್ದರಾಬೇಕಿದೆ ಎಂದರು.
ಭಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮಾತನಾಡಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ ನಡೆಸಿದ ಹೋರಾಟದ ಫಲವಾಗಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ ನಡೆಯುತ್ತಿದೆ. ನಮ್ಮ ಹೋರಾಟ ಇಲ್ಲಿಗೆ ಮುಗಿ ಯುವುದಿಲ್ಲ. ದತ್ತಪೀಠ ಸಂಪೂರ್ಣವಾಗಿ ಹಿಂದೂಗಳ ತಕ್ಕೆಗೆ ಬರುವವರೆಗೂ ಹೋರಾಟ ಮುಂದೂವರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಪೈ, ಮುಖಂಡರಾದ ಯೋಗೀಶ್ ರಾಜ್ ಅರಸ್, ಸಿ.ಡಿ.ಶಿವಕುಮಾರ್, ಆಟೋ ಶಿವಣ್ಣ, ಅಮಿತ್ ಗೌಡ, ವಿನಯ್ ಬಣಕಲ್, ವಕೀಲ ಜಗದೀಶ್ ಬಾಳಿಗ, ಶಶಾಂಕ್ ಹೇರೂರು, ಜಗನ್ನಾಥ ಶಾಸ್ತ್ರೀ ಇದ್ದರು.



